ಬಾಗಲಕೋಟೆ: ‘ಕೋವಿಡ್ ಹರಡುವಿಕೆ ತಡೆಗಟ್ಟಲು ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ ಜ.2ರಿಂದ 9ರವರೆಗೆ ಜರುಗಲಿರುವ ಮಾರುತೇಶ್ವರ ದೇವಸ್ಥಾನದ ಕಾರ್ತೀಕೋತ್ಸವ ನಿಷೇಧಿಸಲಾಗಿದೆ’ ಎಂದು ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ತಿಳಿಸಿದರು.
ತುಳಸಿಗೇರಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅವರು,ದೇವಸ್ಥಾನದ ಪರಿಸರದಲ್ಲಿ ಕೋವಿಡ್ ಸುರಕ್ಷತಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಹೀಗಾಗಿ ಕಾರ್ತೀಕೋತ್ಸವ ನಿಷೇಧಿಸುವುದು ಅನಿವಾರ್ಯ. ಬೇರೆ ಜಿಲ್ಲೆ, ತಾಲ್ಲೂಕು, ಗ್ರಾಮಗಳಿಂದ ಬರುವವರಿಂದ ಕೋವಿಡ್ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಉತ್ಸವ ನಿಷೇಧಿಸಲಾಗಿದೆ ಎಂದು ಹೇಳಿದರು.
ಈ ವರ್ಷ ಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಇದ್ದು, ಮಾರುತೇಶ್ವರರನ್ನು ಸಂಪ್ರದಾಯವಾಗಿ ಪಾರ್ಥಿಸಿ ಪೂಜೆ ಸಲ್ಲಿಸಬೇಕಿದೆ. ದೇವಸ್ಥಾನದ ಆವರಣದಲ್ಲಿ ಮಿಠಾಯಿ, ಬಳೆ, ಪಳಾರ, ಮತ್ತಿತರ ಅಂಗಡಿಗಳಿಗೆ ಪರವಾನಗಿ ನೀಡುವುದಿಲ್ಲ. ತೆಂಗಿನಕಾಯಿ, ಹೂ, ಹಣ್ಣು ವ್ಯಾಪಾರಸ್ಥರಿಗೂ ಅನುಮತಿ ಇಲ್ಲ ಎಂದರು.
ಈ ವರ್ಷ ತೆಂಗಿನಕಾಯಿ ಟೆಂಡರ್ ರದ್ದುಪಡಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆಗೆ ಆಡಳಿತಾಧಿಕಾರಿಯ ಪೂರ್ವಾನುಮತಿ ಹಾಗೂ ಸಂಬಂಧಿಸಿದ ಇಲಾಖೆಯಿಂದ ಪರವಾನಗಿಯನ್ನು ಭಕ್ತರು, ಗ್ರಾಮಸ್ಥರು ಹಾಗೂ ಅರ್ಚಕರು ಪಡೆಯುವುದು ಕಡ್ಡಾಯವಾಗಿದೆ ಎಂದರು.
ಪ್ರತಿ ವರ್ಷ ಮಾರುತೇಶ್ವರ ಜಾತ್ರೆಗೆ ಲಕ್ಷಾಂತರ ಜನ ಬರುತ್ತಿರುವುದು ಗಮನಿಸಲಾಗಿದೆ. ಈ ಹಿನ್ನೆಲೆ ಜನರ ನಡುವೆ ಸುರಕ್ಷಿತ ಅಂತರ ತಡೆಯುವುದು ಕಷ್ಟ. ಹೀಗಾಗಿ ಭಕ್ತರು ಸಹಕರಿಸಲು ಕೋರಿದರು.
ತುಳಸಿಗೇರಿ ಪಿಡಿಒ, ಅರ್ಚಕರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮಸ್ಥರು ಇದ್ದರು.