ರಬಕವಿ ಬನಹಟ್ಟಿ: ‘ಮುಂದಿನ ದಿನಗಳಲ್ಲಿ ಕೃಷ್ಣಾ ನದಿ ಸಂಪೂರ್ಣ ಖಾಲಿಯಾಗುವ ಆತಂಕವಿದ್ದು, ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡಬೇಕು’ ಎಂದು ಶಾಸಕ ಸಿದ್ದು ಸವದಿ ಆಗ್ರಹಿಸಿದರು.
ಈ ಕುರಿತು ಬಾಗಲಕೋಟೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು ಮತ್ತು ಜಲ ಸಂಪನ್ಮೂಲ ಸಚಿವರ ನಿಯೋಗವನ್ನು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ, ನೀರಿಗಾಗಿ ಮನವಿ ಮಾಡಬೇಕು’ ಎಂದರು.
‘ಕೃಷ್ಣಾ ನದಿ ಬತ್ತುತ್ತಿದ್ದು, ಬಾವಿ, ಕೊಳವೆ ಬಾವಿ, ಕೆರೆಗಳಲ್ಲಿ ನೀರು ಬರಿದಾಗುತ್ತಿದೆ. ಮೂರು ಜಿಲ್ಲೆಗಳ ಜನ ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಆದಷ್ಟು ಬೇಗ ಮುಖ್ಯಮಂತ್ರಿ ಅವರು ಮಹಾರಾಷ್ಟ್ರ ಸರ್ಕಾರದ ಜೊತೆಗೆ ಚರ್ಚಿಸ ಲು ಸಮಯ ನಿಗದಿಪಡಿಸಬೇಕು. ಮಳೆಯಾಗಿ, ಕೃಷ್ಣಾ ನದಿಗೆ ನೀರು ಹರಿದು ಬರುವವರೆಗೆ 4 ಟಿಎಂಸಿ ಅಡಿ ನೀರು ಪೂರೈಕೆ ಮಾಡಲು ಮನವಿ ಮಾಡಬೇಕು’ ಎಂದು ತಿಳಿಸಿದರು.
ಸಂಜಯ ತೆಗ್ಗಿ, ಸುರೇಶ ಅಕ್ಕಿವಾಟ, ಬಾಬಾಗೌಡ ಪಾಟೀಲ, ವರ್ಧಮಾನ ಕೋರಿ, ಪುಂಡಲೀಕ ಪಾಲಭಾವಿ, ಶಂಕರ ಹುನ್ನೂರ, ಆನಂದ ಕಂಪು, ರವಿ ಕೊರ್ತಿ, ರಾಜು ಕದಂ ಇದ್ದರು.