ಹುನಗುಂದ: ಜಮೀನು ಹಕ್ಕು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಅಡಿಹಾಳ–ಧನ್ನೂರ ಗ್ರಾಮ ಲೆಕ್ಕಾಧಿಕಾರಿ ವಿಜಯ ಶಹಾಪುರಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂಗಪ್ಪ ಶಿವಪ್ಪ ಗೌಡರ ಅವರು ತಮ್ಮ ಮಗ ಶರಣಪ್ಪ ಗೌಡರ ಹೆರಿಗೆ ಅಡಿಹಾಳ ಗ್ರಾಮದ ಸರ್ವೆ ನಂ. 35/45 ರಲ್ಲಿನ 3.15 ಎಕರೆ ಜಮೀನು ಹಕ್ಕು ವರ್ಗಾವಣೆ ಮಾಡಿಕೊಡಲು ಗ್ರಾಮಲೆಕ್ಕಾಧಿಕಾರಿಗೆ ಮನವಿ ಮಾಡಿದ್ದರು. ಇದಕ್ಕೆ ಗ್ರಾಮ ಲೆಕ್ಕಾಧಿಕಾರಿ ಶಹಾಪುರಕರ್ ₹20ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ಮಾಡಿದ ನಂತರ ₹15 ಸಾವಿರ ನೀಡಲು ಮಾತುಕತೆಯಾಗಿತ್ತು.
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೋ ಸಂಭಾಷಣೆಯನ್ನು ರೈತ ಸಂಗಪ್ಪ ಶಿವಪ್ಪ ಗೌಡರ ಅವರು ಎಸಿಬಿಗೆ ನೀಡಿದ್ದರು. ಬುಧವಾರ ಪಟ್ಟಣದ ಚಿತ್ತವಾಡಗಿ ರಸ್ತೆಯ ಕಚೇರಿಯಲ್ಲಿ ₹7 ಸಾವಿರ ಲಂಚ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದರು.
ಎಸಿಬಿ ಡಿ.ಎಸ್.ಪಿ. ವಿಜಯಕುಮಾರ ಬಿಸನಹಳ್ಳಿ, ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ, ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.