‘ಕನ್ನಡ ಬರೀ ಭಾಷೆಯಲ್ಲ, ಸಂಸ್ಕೃತಿ ಪ್ರತೀಕ’

ಬಾಗಲಕೋಟೆ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದು ಬರೀ ಭಾಷೆಯಲ್ಲ; ಶ್ರೇಷ್ಠ ಸಂಸ್ಕೃತಿಯ ಪ್ರತೀಕ ಎಂದು ಅಮೆರಿಕದ ನ್ಯೂಜೆರ್ಸಿಯ 'ಸಾಹಿತ್ಯ ಸುಧೆ- ಕನ್ನಡ ಸಾಹಿತ್ಯ ವೇದಿಕೆ'ಯ ಸರಿತಾ ನವಲಿ ಹೇಳಿದರು.
'ಕನ್ನಡ ಕಾಯಕ ವರ್ಷ'ದ ಅಂಗವಾಗಿ ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 'ಕನ್ನಡ ಭಾಷಾ ಬೆಳವಣಿಗೆ ಮತ್ತು ತಂತ್ರಜ್ಞಾನ' ಕುರಿತ ವೆಬಿನಾರ್ದಲ್ಲಿ ಮಾತನಾಡಿದರು.
ನಿರಂತರವಾಗಿ ಬೆಳವಣಿಗೆ ಸಾಧಿಸಿದರೆ ಮಾತ್ರ ಯಾವುದೇ ಭಾಷೆ ಮುಂದುವರಿಯಲು ಸಾಧ್ಯ. ಮೊದಲು, ಒಂದು ಭಾಷೆಯ ಉಳಿವು ಆ ಭಾಷೆಯನ್ನು ಮಾತನಾಡುವವರನ್ನು ಅವಲಂಬಿಸಿತ್ತು. ಈಗ, ಆ ಭಾಷೆ ತಂತ್ರಜ್ಞಾನದಲ್ಲಿ ಎಷ್ಟು ಮುಂದುವರಿದಿದೆ ಎಂಬುದು ಪ್ರಧಾನವಾಗಿದೆ. ಹಲವು ಕನ್ನಡ ತಂತ್ರಾಂಶ, ಅಪ್ಲಿಕೇಶನ್ಗಳು ಬಳಕೆಗೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಭಾಷಾಭಿಮಾನ ಬೆಳೆಸುವಲ್ಲಿ, ಕನ್ನಡದ ಹಿರಿಮೆ ಪರಿಚಯಿಸಲು ಕನ್ನಡ ಸಂಘಗಳ ಪಾತ್ರ ದೊಡ್ಡದು ಎಂದರು.
ಪ್ರಸಾರಂಗದ ಸಹಾಯಕ ನಿರ್ದೇಶಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಜಾಗತೀಕರಣದ ಈ ಸಂದರ್ಭದಲ್ಲಿ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಂಡು ಉಳಿದ ಜಾಗತಿಕ ಭಾಷೆಗಳ ಜೊತೆಗೆ ಆತ್ಮವಿಶ್ವಾಸದಿಂದ ಸಾಗಬೇಕಿದೆ ಎಂದರು.
ಸಂಸ್ಥೆಯ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯೆ ಡಾ. ವಿ.ಎಸ್.ಮಠ, ವಿಭಾಗ ಮುಖ್ಯಸ್ಥೆ ಡಾ. ಎಸ್.ಜಿ.ನಾವಲಗಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.