ಕುರುಗೋಡು: ಸಮೀಪದ ದರೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ತೋಳಗಳ ಗುಂಪು ನಡೆಸಿದ ದಾಳಿಯಲ್ಲಿ 12 ಕುರಿ ಮರಿಗಳು ಮೃತಪಟ್ಟಿವೆ.
ಬೆಳಗಾವಿ ಜಿಲ್ಲೆಯ ಯಮಗರಣಿ ಗ್ರಾಮದ ಸಿದ್ದಪ್ಪನಿಗೆ ಎಂಬುವರಿಗೆ ಸೇರಿದ 100ಕ್ಕೂ ಅಧಿಕ ಕುರಿ ಮರಿಗಳನ್ನು ಕುರುಗೋಡು ಹೊರ ವಲಯದ ಕುರಿಹಟ್ಟಿಯಲ್ಲಿ ಬಿಟ್ಟಿದ್ದರು.
ಕುರಿಗಾಹಿ ಸಿದ್ದಪ್ಪ ಪ್ರತಿಕ್ರಿಯಿಸಿ, ‘ಕುರಿ ಮರಿಗಳನ್ನು ಬೆಳೆಸಿ ಮಾರಾಟಮಾಡುವ ಕಾಯಕ ನಮ್ಮದು. ಮೂರು ತಿಂಗಳು ತುಂಬಿದ 100 ಕುರಿಮರಿಗಳಲ್ಲಿ 12 ಮರಿಗಳನ್ನು ತೋಳಗಳು ಸಾಯಿಸಿವೆ. ಇದರಿಂದ ₹65 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ’ ಎಂದರು.
ಪಶು ಇಲಾಖೆ, ಕಂದಾಯ ಮತ್ತು ಪೊಲೀಸ್ ಇಲಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.