ಸಿರುಗುಪ್ಪ: ‘ಕಾಯಕದಿಂದ ಜಾತಿಗಳು ಹುಟ್ಟಿಕೊಂಡಿವೆ. ಮನುಷ್ಯನ ಹುಟ್ಟಿನಿಂದಲ್ಲ. ಜಗತ್ತಿನಲ್ಲಿ ಎರಡೇ ಜಾತಿಗಳು ಒಂದು ಗಂಡು, ಒಂದು ಹೆಣ್ಣು’ ಎಂದು ಅಂಕಲಿಮಠದ ವೀರಭದ್ರ ಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಸಿಂಧನೂರು ರಸ್ತೆಯ ಅಂಕಲಿಮಠದ ಶಾಖಾಮಠದಲ್ಲಿ ಗೋಮರ್ಷಿ ಮಲ್ಲಪ್ಪ ಶರಣರ 25ನೇ ಜಾತ್ರಮಹೋತ್ಸವ ಹಾಗೂ ಮುಗಳಖೋಡ ಯಲ್ಲಾಲಿಂಗ ಮಹಾರಾಜ್ ಶಿವಯೋಗಿಗಳವರ ಪುರಾಣ ಮಹಾ ಮಂಗಲೋತ್ಸವ ಅಂಗವಾಗಿ ಗುರುವಾರ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಕ್ತರಿಂದ ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದರು.
‘ಮಹಾತ್ಮರ, ಸಾಧು, ಸಂತರ ಸಂದೇಶಗಳನ್ನು ಆಲಿಸುವುದರಿಂದ ಮನುಷ್ಯನಲ್ಲಿರುವ ಕೆಟ್ಟ ಆಲೋಚನೆಗಳನ್ನು ಹೋಗಲಾಡಿಸಬಹುದು. ಹಿರಿಯರ ಹೆಸರಿನಲ್ಲಿ ಪುಣ್ಯ ತಿಥಿಗಳನ್ನು ಮಾಡದೇ, ಅವರ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳು ಮಾಡುವುದರಿಂದ ಶ್ರೇಷ್ಠವಾದ ಫಲ ದೊರೆಯುತ್ತದೆ’ ಎಂದರು. ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷ ಟಿ.ಎಂ.ಚಂದ್ರಶೇಖರಯ್ಯ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಉಷಾ, ಪಿ.ಎಸ್.ಐ. ಎನ್.ರಘು, ಮುಖಂಡರಾದ ಕೆ.ವೆಂಕಟರಾಮರೆಡ್ಡಿ, ವೀರೇಶ್ಗೌಡ, ವೈ.ಶ್ರೀನಿವಾಸ, ಬಳ್ಳಾರೆಪ್ಪ ತಾತ, ಕೊಮಾರೆಪ್ಪ, ಕೆ.ಈರಣ್ಣ, ಚನ್ನಬಸವ ಇದ್ದರು.
ಮುಗಳಖೋಡ ಯಲ್ಲಾಲಿಂಗ ಮಹಾರಾಜ್ ಶಿವಯೋಗಿಗಳ ಪುರಾಣವನ್ನು ಶರಣಯ್ಯ ಶಾಸ್ತ್ರಿ ಹಿರೇಮಠ್ ವಾಚಿಸಿದರು. ವಿಶ್ವನಾಥ ಗವಾಯಿ, ವೀರೇಶ್ ನವಲಿ ಸಂಗೀತ ಸೇವೆ ನಡೆಸಿಕೊಟ್ಟರು.