ಹೊಸಪೇಟೆ: ಹಾಸ್ಟೆಲ್ ತೆರೆಯಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಸಲ್ಲಿಸಿದರು.
ಅನೇಕ ತಿಂಗಳಿಂದ ಹಾಸ್ಟೆಲ್ಗಳು ತೆರೆದಿಲ್ಲ. ಈಗ ಕಾಲೇಜು ಆರಂಭಗೊಂಡಿರುವುದರಿಂದ ಅವುಗಳನ್ನು ತೆರೆಯಬೇಕು. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದೇ ರೀತಿ ಅರ್ಜಿ ಸಲ್ಲಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ತಕ್ಷಣವೇ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಅನೇಕ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಹುದ್ದೆ ಖಾಲಿ ಇವೆ. ಸರ್ಕಾರ ಆದಷ್ಟು ಶೀಘ್ರ ಆ ಹುದ್ದೆಗಳನ್ನು ತುಂಬಬೇಕು. ವೇತನ ಪಾವತಿಸದ ಉಪನ್ಯಾಸಕರಿಗೆ ಆದಷ್ಟು ಶೀಘ್ರ ಕೊಡಬೇಕು ಎಂದು ಆಗ್ರಹಿಸಿದರು.
ಪರಿಷತ್ತಿನ ಅಭಿಜಿತ್, ಪರೀಕ್ಷಿತ್ ದೇಸಾಯಿ, ರೇಣುಕಪ್ಪ ಚೌಡ್ಕಿ,ವೀರೇಶ್, ತನುಜಾ, ಸುನೀತಾ, ಮಹಾಲಕ್ಷ್ಮಿ, ಆನಂದ್, ಚಿದಾನಂದ, ಚೆನ್ನಬಸವ ಇದ್ದರು.