ಬಳ್ಳಾರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಎರಡು ದಿನಗಳಿಂದ ವಹಿವಾಟು ಸ್ಥಗಿತ ಗೊಂಡಿದ್ದು, ಖರೀದಿದಾರರು ಮತ್ತು ದಲ್ಲಾಳಿಗಳ ಸಂಘದ ಅಧ್ಯಕ್ಷರಿಗೆ ಎಪಿಎಂಸಿ ಕಾರ್ಯದರ್ಶಿ ನೋಟಿಸ್ ನೀಡಿದ್ದಾರೆ.
‘ಖರೀದಿದಾರರೊಬ್ಬರು ದಲ್ಲಾಳಿಗಳ ಮೂಲಕ ರೈತರಿಂದ ₹2 ಕೋಟಿ ಮೌಲ್ಯದ ಶೇಂಗಾ ಖರೀದಿಸಿದ್ದು, ಹಣ ಪಾವತಿಸದೇ ತಲೆ ಮರೆಸಿಕೊಂಡಿದ್ದಾರೆ. ಹಾಗಾಗಿ, ಎಪಿಎಂಸಿಯಲ್ಲಿ ದಲ್ಲಾಳಿಗಳು ವಹಿವಾಟು ನಿಲ್ಲಿಸಿದ್ದಾರೆ. ಎರಡು ದಿನಗಳಿಂದ ರೈತರು ಶೇಂಗಾ ಮಾರಲು ಸಾಧ್ಯವಾಗಿಲ್ಲ. ಇತರ ಉತ್ಪನ್ನಗಳ ಮಾರಾಟದ ಮೇಲೆಯೂ ಪರಿಣಾಮ ಬೀರಿದೆ’ ಎಂದು ಮೂಲಗಳು ತಿಳಿಸಿವೆ.
‘ಖರೀದಿದಾರ ಹಣ ಕೊಡದೇ ತಲೆಮರೆಸಿಕೊಂಡ ಬಗ್ಗೆ ಎಪಿಎಂಸಿಗೆ ದೂರು ಬಂದಿಲ್ಲ. ಆದರೆ, ವಹಿವಾಟು ನಿಂತಿದೆ. ಖರೀದಿದಾರರು, ದಲ್ಲಾಳಿಗಳ ಸಂಘದ ಅಧ್ಯಕ್ಷರಿಗೆ ನೋಟಿಸ್ ನೀಡಲಾಗಿದೆ. ಯಾವುದೇ ಖರೀದಿದಾರ ಉತ್ಪನ್ನ ಖರೀದಿಸಿದ ದಿನವೇ ದಲ್ಲಾಳಿಗಳಿಗೆ ಹಣ ಪಾವತಿಸಬೇಕು. ದಲ್ಲಾಳಿ ಅದೇ ದಿನ ರೈತನಿಗೆ ಹಣ ನೀಡಬೇಕು ಎಂಬ ನಿಯಮವಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ನಂಜುಂಡಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬಳ್ಳಾರಿ ಎಪಿಎಂಸಿಯಲ್ಲಿ ನಿತ್ಯ ₹40 ಕೋಟಿವರೆಗೆ ವಹಿವಾಟು ನಡೆಯುತ್ತದೆ. ದಿನಕ್ಕೆ 22 ಸಾವಿರ ಚೀಲ ಶೇಂಗಾ ಬರುತ್ತದೆ.