ಬಳ್ಳಾರಿ: ಶ್ರೀರಾಮುಲುಗೆ, ಬದಾಮಿ ಮತ್ತು ಮೊಳಕಾಲ್ಮೂರುಗೆ ಏನು ಸಂಬಂಧ ಎಂದು ಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಣ್ಣ ಫಕ್ಕೀರಪ್ಪ ರಾಯಚೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಇತ್ತೀಚೆಗೆ, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ನನ್ನ ಸ್ಥಳೀಯತೆಯನ್ನು ಪ್ರಶ್ನಿಸುವ ಬಿಜೆಪಿಯವರು ಇದೆಲ್ಲವನ್ನು ಮರೆಯಬಾರದು ಎಂದರು.
ಎಲ್ಲಾ ಕಾಂಗ್ರೆಸ್ ಮುಖಂಡರು ನನ್ನ ಜತೆ ಚೆನ್ನಾಗಿದ್ದಾರೆ. ನಾನು ಈ ಮಣ್ಣಿನ ಮಗ, ಪಕ್ಕದ ಪಾವಗಡದವನು. ಅಲ್ಲಂ ವೀರಭದ್ರಪ್ಪ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಾನು ಕಾರ್ಯದರ್ಶಿಯಾಗಿದ್ದೆ.ಬಳ್ಳಾರಿ ಉಸ್ತುವಾರಿಯಾಗಿ 10ವರ್ಷಗಳುಕೆಲಸ ಮಾಡಿದ್ದೇನೆಎಂದರು.
ಕೆಲವರು ಸಮಯಕ್ಕೆ ತಕ್ಕಂತೆ ಮಾತನಾಡುತ್ತಾರೆ.ನಾನು ಸ್ಥಳೀಯವಾಗಿ ಇದ್ದು ಕೆಲಸ ಮಾಡುವೆ, ಇಲ್ಲೆ ಉಳಿಯುವೆ, ಪಕ್ಷದ ನಿರ್ಣಯ ಪಾಲನೆ ಮಾಡುವೆ- ಉತ್ತಮ ಕೆಲಸ ಮಾಡಿ, ಲೋಕಸಭೆಯಲ್ಲಿ ಹೆಸರು ತರುವೆ.ಕಾಂಗ್ರೆಸ್, ಬಿಜೆಪಿ ನಡುವೆ ಮಾತ್ರ ಸ್ಪರ್ಧೆ ನಡೆಯುತ್ತದೆ. ಲೋಕಸಭೆಗೆ ಆಯ್ಕೆಯಾಗುವವರಿಗೆಪರಿಪೂರ್ಣ ಜ್ಞಾನ ಇರಬೇಕು ಎಂದರು.
ನಮ್ಮ ಪಕ್ಷದಲ್ಲಿ ಗೊಂದಲಕ್ಕೆ ಅವಕಾಶವಿಲ್ಲ. ಪಕ್ಷಕ್ಕೆ 130ವರ್ಷಗಳ ಇತಿಹಾಸವಿದೆ. ಪಕ್ಷ ಸೂಕ್ತ ನಿರ್ಣಯ ಮಾಡಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎರಡೂ ಸಿದ್ಧಾಂತಗಳ ನಡುವಿನ ಹೋರಾಟ ಇದು ಎಂದರು.
ನಾನು ಯಾವ ಟ್ರಬಲ್ ಶೂಟರೂ ಅಲ್ಲ ಎಂದು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ದುರ್ಗಮ್ಮ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಉಗ್ರಪ್ಪ ತೆರದ ವಾಹನದಲ್ಲಿ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್, ಶಾಸಕ ಈ.ತುಕಾರಾಂ ಜೊತೆಗಿದ್ದರು.
ಸಹೋದರ ವೆಂಕಟೇಶ ಪ್ರಸಾದ್ಗೆ ಟಿಕೆಟ್ ಬಯಸಿದ್ದ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಗೈರು ಎದ್ದು ಕಾಣುತ್ತಿತ್ತು.
ಡಿ.ಕೆ.ಶಿವಕುಮಾರ್ ಅವರಿಂದ ನೀತಿಸಂಹಿತೆ ಉಲ್ಲಂಘನೆ?
ನಾಮಪತ್ರ ಸಲ್ಲಿಸುವ ಮುನ್ನ ಅಭ್ಯರ್ಥಿ ಉಗ್ರಪ್ಪ ಅವರೊಂದಿಗೆ ನಗರದ ಕನಕದುರ್ಗಮ್ಮ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಆಡಳಿತ ಮಂಡಳಿಯ ಕಚೇರಿಯಲ್ಲಿ ಮಾತನಾಡಿರುವುದು ಚುನಾವಣೆ ನೀತಿಸಂಹಿತೆಯ ಉಲ್ಲಂಘನೆ ಎಂಬ ಆರೋಪ ಕೇಳಿ ಬಂದಿದೆ.
(ಬಿಜೆಪಿ ಅಭ್ಯರ್ಥಿ ಜೆ.ಶಾಂತ)
ಕುರುಬ ಸಮುದಾಯದ ಮಹಿಳೆ ಕಾಲು ಮುಗಿದ ಜೆ.ಶಾಂತ
ಲೋಕಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಜೆ.ಶಾಂತ ನಾಮಪತ್ರ ಸಲ್ಲಿಸುವ ಮುನ್ನ ನಗರದ ದುರ್ಗಮ್ಮ ಗುಡಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕುರುಬ ಸಮುದಾಯದ ಮಹಿಳೆ ಹಾಗೂ ಬಿಜೆಪಿಯ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲಾ ಅವರ ಕಾಲು ಮುಗಿದರು.
ಕುರುಬರ ಕಾಲಿಗೆ ಬಿದ್ದರೆ ಶುಭವಾಗುತ್ತದೆ ಎಂಬ ಉದ್ದೇಶದಿಂದ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.