ಈ ಕುರಿತು ಪ್ರಜಾವಾಣಿಗೆ ಮಾಹಿತಿ ನೀಡಿರುವ ಗ್ರಾಮದ ವೀರೇಶ್, ಬೆಳ್ಳಗಟ್ಟೆ ಗ್ರಾಮ ಪಂಚಾಯ್ತಿಯ 2020-21ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ನಡೆಸಿದ ಬಗ್ಗೆ ಇಂಗು ಗುಂಡಿ ಬಳಿ ಫಲಕ ಹಾಕಲಾಗಿದೆ. ಆದರೆ ಅದರಲ್ಲಿ ಯಾವುದೇ ವಿವರ ಇಲ್ಲ. ಕಳಪೆ ಕಾಮಗಾರಿಯಿಂದ ಇಂಗು ಗುಂಡಿಯ ಗೋಡೆಗಳು ನೀರಿನಲ್ಲಿ ಕರಗಿ ಹೋಗುವ ರೀತಿಯಲ್ಲಿ ಬಿರುಕು ಬಿಟ್ಟಿದೆ. ಈ ಗುಂಡಿಯಲ್ಲಿ ಈಗ ನೀರು ನಿಂತಿದ್ದು, ಕುರಿ, ಜಾನುವಾರುಗಳು ನೀರು ಕುಡಿಯಲು ಹೋದರೆ ಗುಂಡಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಕಳಪೆ ಕಾಮಗಾರಿ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಅವರಿಗೆ ಪೋನ್ ಮಾಡಿದರೆ, ಸ್ವಿಚ್ ಆಫ್ ಅಗಿತ್ತು.