ತೋರಣಗಲ್ಲು: ಶಾಲಾ ಮಕ್ಕಳ, ರೈತರ, ವಿವಿಧ ಕೈಗಾರಿಕೆಗಳಿಗೆ ತೆರಳುವ ಕಾರ್ಮಿಕರ ಹಾಗೂ ಬನ್ನಿಹಟ್ಟಿ, ಎಸ್.ಗಂಗಾಲಾಪುರ ಎರಡು ಗ್ರಾಮಗಳ ನಾಗರಿಕರ ಅನುಕೂಲಕ್ಕಾಗಿ ಸುಸಜ್ಜಿತ ರಸ್ತೆ ಹಾಗೂ ಸೇತುವೆಯನ್ನು ಶೀಘ್ರದಲ್ಲಿ ನಿರ್ಮಿಸಲಾಗುವುದು ಎಂದು ಸಂಡೂರು ಶಾಸಕ ಈ.ತುಕಾರಾಂ ಹೇಳಿದರು.
ಸಮೀಪದ ಬನ್ನಿಹಟ್ಟಿ ಗ್ರಾಮದ ನಾರಿಹಳ್ಳದ ಬಳಿ ಬನ್ನಿಹಟ್ಟಿ- ಎಸ್.ಗಂಗಾಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ, ಸೇತುವೆಯ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನ ಯೋಜನೆಯಲ್ಲಿ ಸುಮಾರು ₹ 1.90 ಲಕ್ಷ ವೆಚ್ಚದಲ್ಲಿ ನೂತನ ಸೇತುವೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಲ್ಲಿ ಸುಮಾರು ₹ 1ಕೊಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುವುದು. ಬನ್ನಿಹಟ್ಟಿ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಇದಕ್ಕೂ ಮೊದಲು ಶಾಸಕರು ವಿ. ನಾಗಾಲಾಪುರ ಗ್ರಾಮಕ್ಕೆ ತೆರಳಿ ಆಂಜಿನೇಯ ಹಾಗೂ ದುರುಗಮ್ಮ ದೇವಾಲಯಲ್ಲಿ ಪೂಜೆ ಸಲ್ಲಿಸಿದರು. ಗ್ರಾಮದ ಪರಿಶಿಷ್ಟರ ಕಾಲೊನಿಗೆ ತೆರಳಿ ಅಲ್ಲಿನ ಮೂಲ ಸೌಲಭ್ಯಗಳ ಕುರಿತು ನಾಗರಿಕರ ಬಳಿ ಚರ್ಚಿಸಿದರು.