ಹೊಸಪೇಟೆ: ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದ, ತಂಗಾಳಿ ಬೀಸುತ್ತಿತ್ತು. ಈ ವೇಳೆ ತಾ ಮುಂದು, ನಾ ಮುಂದು ಎಂದು ಹುಟ್ಟು ಹಾಕುತ್ತಿದ್ದರು. ತೆಪ್ಪಗಳಲ್ಲಿ ಮೊದಲ ಗುರಿ ತಲುಪುವ ಹಣಾಹಣಿ ಏರ್ಪಟ್ಟಿತ್ತು.
ಹಂಪಿ ಉತ್ಸವದ ಪ್ರಯುಕ್ತ ಇಲ್ಲಿನ ಕಮಲಾಪುರ ಕೆರೆಯಲ್ಲಿ ಭಾನುವಾರ ಸಂಜೆ ನಡೆದ ಮೀನುಗಾರರ ಸಾಂಪ್ರದಾಯಿಕ ತೆಪ್ಪ ಓಡಿಸುವ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳಿವು.
ಉತ್ಸಾಹದಿಂದ ಪಾಲ್ಗೊಂಡಿದ್ದ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಹುಟ್ಟು ಹಾಕಿ, ತೆಪ್ಪ ಓಡಿಸಿದರು. ಇತ್ತ ದಡದಲ್ಲಿ ನಿಂತಿದ್ದ ಜನ ಶಿಳ್ಳೆ, ಕೇಕೆ ಹೊಡೆದು ಅವರನ್ನು ಹುರಿದುಂಬಿಸುತ್ತಿದ್ದರು.
ಅಂತಿಮವಾಗಿ ಸ್ಪರ್ಧೆಯಲ್ಲಿಕಮಲಾಪುರದ ನಾಗರಾಜ ಮತ್ತು ಪಂಪಾಪತಿಗೆ ಪ್ರಥಮ, ಹನುಮಂತ ಮತ್ತು ರಾಜು ದ್ವಿತೀಯ ಹಾಗೂ ರಾಮು– ರವಿ ತೃತೀಯ ಬಹುಮಾನ ಗಳಿಸಿದರು.
ಕಮಲಾಪುರದ ಗೋವಿಂದಮ್ಮ ಮತ್ತು ನಂದ ಪ್ರಥಮ ಬಹುಮಾನ ಪಡೆದರೆ, ಹಂಪಮ್ಮ ಮತ್ತು ಪೊನ್ನಮ್ಮ ದ್ವಿತೀಯ ಹಾಗೂ ಮೋನಮ್ಮ–ಜಯಂತಿ ತೃತೀಯ ಬಹುಮಾನಕ್ಕೆ ಪಾತ್ರರಾದರು.
₹5000 ಪ್ರಥಮ, ₹3,000 ದ್ವಿತೀಯ ಹಾಗೂ ₹2,000 ತೃತೀಯ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳಿಗೆ ತಲಾ ₹500 ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಸ್ಪರ್ಧೆಯಲ್ಲಿ ಒಟ್ಟು 23 ಪುರುಷ ಮತ್ತು ಆರು ಮಹಿಳಾ ತಂಡಗಳು ಪಾಲ್ಗೊಂಡಿದ್ದವು. ನುಪಾಸನಾ ಸಾಹಸ ಕ್ರೀಡಾ ಸಂಸ್ಥೆಯ ನಿರ್ದೇಶಕ ಎಂ.ಎ. ಶಕೀಲ್ ಇದ್ದರು.