ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಭಾಷೆಯಿಂದ ಭಾರತದಲ್ಲಿ ದೊಡ್ಡ ಬದಲಾವಣೆ: ಸಂಶೋಧನಾ ವಿದ್ಯಾರ್ಥಿ ಪ್ರೀತಿ

Last Updated 19 ಫೆಬ್ರುವರಿ 2021, 7:01 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ಡಚ್ಚರು, ಫ್ರೆಂಚರು, ಅರಬ್ಬರು, ತುರ್ಕರು ಸೇರಿದಂತೆ ಅನೇಕ ವಿದೇಶಿಯರು ದಾಳಿ ಮಾಡಿದ್ದರೂ ಬಹುತ್ವದ ಸಂಸ್ಕೃತಿ ಹೊಂದಿರುವ ಭಾರತದ ಮೇಲೆ ಹೆಚ್ಚಿನ ಪ್ರಭಾವವಾಗಲಿ, ಪರಿಣಾಮಗಳಾಗಿ ಆಗಲಿಲ್ಲ. ಆದರೆ, ಬ್ರಿಟಿಷರ ದಾಳಿಯಿಂದ ಭಾರತದ ಸಾಮಾಜಿಕ ಸಂರಚನೆ ಮೇಲೆ ಹಲವು ರೀತಿಯ ಪರಿಣಾಮಗಳಾಗಿವೆ’ ಎಂದು ಸಂಶೋಧನಾ ವಿದ್ಯಾರ್ಥಿ ಎಸ್‌.ಕೆ. ಪ್ರೀತಿ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಗುರುವಾರ ಏರ್ಪಡಿಸಿದ್ದ ದೇಸಿ ಮಾತು–2 ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವ್ಯಾಪಾರದ ಕಾರಣದಿಂದ ಭಾರತಕ್ಕೆ ಬಂದ ಬ್ರಿಟಿಷರು ನಂತರದಲ್ಲಿ ಧಾರ್ಮಿಕ ಪ್ರಚಾರದಲ್ಲಿ ತೊಡಗಿದರು. ತಮ್ಮ ಸಂಸ್ಕೃತಿಯನ್ನು ಭಾರತೀಯರ ಮೇಲೆ ಒತ್ತಾಯಪೂರ್ವಕವಾಗಿ ಹೇರತೊಡಗಿದರು. ಜಾತಿ ಪದ್ಧತಿಯ ಮೇಲೆ ನಿಂತಿದ್ದ ಭಾರತೀಯ ಸಮಾಜದಲ್ಲಿ ಬ್ರಿಟಿಷರ ಮೂಲಕವಾಗಿ ಬಂದ ಇಂಗ್ಲಿಷ್‌ ಭಾಷೆಯು ಪಾಶ್ಚಾತ್ಯರ ಅನೇಕ ಚಿಂತನೆಗಳನ್ನು ಪರಿಚಯಿಸಿಯಿತು. ಸಮಾಜದ ಎಲ್ಲಾ ವರ್ಗದವರಿಗೂ ಶಿಕ್ಷಣ ನೀಡಿತು’ ಎಂದರು.

‘ಬಹುಸಂಸ್ಕೃತಿ, ಬಹುಭಾಷಿಕ ಹಿನ್ನೆಲೆಯ ಭಾರತವನ್ನು ಇಂಗ್ಲಿಷ್‌ ಭಾಷೆಯ ಮೂಲಕವಾಗಿ ಭಾಷಿಕ ಯಜಮಾನಿಕೆಗೆ ಸ್ಥಾಪಿಸಿತು. ಹೀಗೆ ಪಾಶ್ಚಾತ್ಯ ಭಾಷೆಯೊಂದು ಭಾರತೀಯ ಸಮಾಜಕ್ಕೆ ಆಡಳಿತ ಭಾಷೆಯಾಗುವುದಷ್ಟೇ ಅಲ್ಲದೆ ಶಿಕ್ಷಣದ ಭಾಷೆಯಾಗಿ ಪ್ರಾತಿನಿಧ್ಯವನ್ನು ಪಡೆಯಿತು. ಇದರಿಂದ ಭಾರತೀಯ ಸಮಾಜದ ಶ್ರೇಣೀಕರಣ ವ್ಯವಸ್ಥೆಯಲ್ಲಿ ಬದಲಾವಣೆಗಳು ಆದವು’ ಎಂದು ತಿಳಿಸಿದರು.

‘ಭಾರತೀಯ ಸಮಾಜ ಅದನ್ನು ಒಪ್ಪಿಕೊಂಡಿತು, ಅಪ್ಪಿಕೊಂಡಿತು. ಸಮಾನ ಶಿಕ್ಷಣದ ತಳಪಾಯದಲ್ಲಿ ತಳವರ್ಗಗಳಿಗೆ ಬ್ರಿಟಿಷರು ನೀಡಿದ ಶಿಕ್ಷಣವು ಮೇಲ್ವರ್ಗದವರನ್ನು ಪ್ರತಿಭಟಿಸಲು, ಅವರ ಮೋಸ, ವಂಚನೆಗಳನ್ನು ಎದುರಿಸಿ ಕೇಳುವ ಧೈರ್ಯವನ್ನು ನೀಡಿದ್ದರಿಂದ ತಳಮಟ್ಟದ ಜನರಿಂದಲೂ ಅದು ಸ್ವೀಕಾರಕ್ಕೆ ಅರ್ಹವಾಯಿತು’ ಎಂದು ವಿವರಿಸಿದರು.

‘ಮೇಲ್ವರ್ಗದವರೂ ಇಂಗ್ಲಿಷ್‌ ಭಾಷೆಯನ್ನು ತಮ್ಮ ಸ್ಥಾನಮಾನಗಳನ್ನು ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಳ್ಳುವ ಪ್ರತಿಷ್ಠೆಯಾಗಿ ಸ್ವೀಕರಿಸಿದರು. ಸಂಸ್ಕೃತ ಭಾಷೆಯನ್ನು ಬಳಸುತ್ತಿದ್ದ ಬ್ರಾಹ್ಮಣರು ಸಹ ಹೆಚ್ಚಿನ ಮಟ್ಟದಲ್ಲಿ ಇಂಗ್ಲಿಷ್‌ ಭಾಷೆಯ ಮೇಲೆ ವ್ಯಾಮೋಹಗೊಂಡರು. ಕನ್ನಡ ಭಾಷೆಯ ಮಟ್ಟಿಗೆ ಹೇಳುವುದಾದರೆ ವಾಸ್ತವದಲ್ಲಿ ನೋಡಿದರೆ ಇಂದಿಗೂ ಸಹ ಮೇಲ್ವರ್ಗದವರು ಇಂಗ್ಲಿಷ್‌ ಭಾಷೆಯನ್ನು, ತಳವರ್ಗಗಳು ಕನ್ನಡ ಭಾಷೆಯನ್ನು ಹೆಚ್ಚಿನ ರೀತಿಯಲ್ಲಿ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ’ ಎಂದರು.

ಅಧ್ಯಕ್ಷತೆ‌ ವಹಿಸಿದ್ದ ಸಂಶೋಧನಾ ವಿದ್ಯಾರ್ಥಿ ಎಚ್‌.ಕೆ. ಅಭಿಲಾಷ, ‘ಕೇಂದ್ರ ಸರ್ಕಾರದ ಹಿಂದಿ ಹೇರಿಕೆ, ತ್ರಿಭಾಷಾ ಸೂತ್ರ ಇವುಗಳು ಭಾಷಿಕ ಯಜಮಾನಿಕೆಯಿಂದ ಬಂದಿವೆ’ ಎಂದು ಹೇಳಿದರು.

ಸಂಶೋಧನಾ ವಿದ್ಯಾರ್ಥಿಗಳಾದ ಬಿಳೇನಿ ಸಿದ್ದು ಬಿರಾದಾರ,‌‌ ಸತೀಶ ಶಿವಪ್ಪಯ್ಯನಮಠ, ಲಚಮಪ್ಪ, ನಾಗೇಶ್ ಪೂಜಾರಿ, ಎಚ್‌.ಎಸ್‌. ಆನಂದಕುಮಾರ, ವಿ. ಪಂಪಾಪತಿ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT