ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ‘ಹಳೆಕೋಟೆ ಗ್ರಾಮದ ಮರಿಸ್ವಾಮಿ ಮಠದ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತಿದ್ದು, ಇದಕ್ಕೆ ಕಲ್ಲು ಗಣಿಕಾರಿಕೆಗಾಗಿ ನಡೆದ ಸ್ಫೋಟವೇ ಕಾರಣ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಈಚೆಗೆ ಬೆಟ್ಟದಲ್ಲಿ ನಡೆದ ಕಲ್ಲು ಗಣಿಗಾರಿಕೆ ಸ್ಫೋಟದಿಂದ ಕೆರೆಯ ಮೇಲೆಲ್ಲ ಬಿಳಿ ಬೂದಿ ಹರಡಿತ್ತು. ನಂತರದ ದಿನಗಳಲ್ಲಿ ಮೀನುಗಳು ಸಾಯಲು ಆರಂಭಿಸಿದವು. ಮೃತ ಮೀನುಗಳನ್ನು ನಾಯಿ, ಕಾಡುಪ್ರಾಣಿ ಮತ್ತು ಪಕ್ಷಿಗಳು ಕಚ್ಚಿಕೊಂಡು ಒಯ್ಯುತ್ತಿದ್ದು, ಅವುಗಳಿಗೂ ಅಪಾಯ ಇದೆ’ ಎಂದು ಗ್ರಾಮಸ್ಥರು ತಿಳಿಸಿದರು.
‘ಮಠಕ್ಕೆ ಅಂಟಿಕೊಂಡಿರುವ ಬೆಟ್ಟಗಳಲ್ಲಿ ಇತ್ತೀಚೆಗೆ ನಡೆಸಿದ ಭಾರಿ ಪ್ರಮಾಣದ ರಾಸಾಯನಿಕ ಸ್ಫೋಟದಿಂದ ಮೀನುಗಳು ಸತ್ತಿರುವ ಶಂಕೆ ಇದೆ. ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು' ಎಂದು ಮರಿಸ್ವಾಮಿ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಆಗ್ರಹಿಸಿದರು.
‘ಕೆರೆಯಲ್ಲಿನ ಮೀನುಗಳು ಸತ್ತ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುತ್ತೇನೆ’ ಎಂದು ಹಳೆಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.