ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ ವೈದ್ಯಕೀಯ ಸಂಸ್ಥೆಗಳಿಗೆ ವಿಶೇಷ ಸ್ಥಾನಮಾನ: ಸಚಿವ ಶರಣಪ್ರಕಾಶ್‌

Published 2 ನವೆಂಬರ್ 2023, 15:23 IST
Last Updated 2 ನವೆಂಬರ್ 2023, 15:23 IST
ಅಕ್ಷರ ಗಾತ್ರ

ಬಳ್ಳಾರಿ: ‘ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ಮೂಲ ಸೌಕರ್ಯ ಹಾಗೂ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಹೇಳಿದರು.

ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಸ್ತ್ರ ಚಿಕಿತ್ಸೆ ಸಂಕೀರ್ಣ ವಿಭಾಗ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಕಿಮೋ ಥೆರಪಿ ವಿಭಾಗಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮ ‍ಪ‍್ರತಿನಿಧಿಗಳ ಜೊತೆ ಮಾತನಾಡಿದರು.

‘ವಿಮ್ಸ್ ಬಹಳ ಹಳೆಯ ಸಂಸ್ಥೆಯಾಗಿದ್ದು, ಇದರ ಅಭಿವೃದ್ಧಿಗೆ ಸರ್ಕಾರದಿಂದ ವರ್ಷವಾರು ಅನುದಾನ ಒದಗಿಸಲಾಗುತ್ತಿದೆ. ಅನುದಾನದಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಿಜಯನಗರ ಜಿಲ್ಲೆಯಲ್ಲಿ ನೂತನ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಉದ್ದೇಶಿಸಲಾಗಿದೆ’ ಎಂದರು.

ವಿಮ್ಸ್‌ನಲ್ಲಿ ಇತ್ತೀಚಿನ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ, ರೋಸ್ಟರ್ ಮೆರಿಟ್ ಹಾಗೂ ಪದೋನ್ನತಿ ಆಧಾರದ ಮೇಲೆ ನೇಮಿಸುವ ವಿಚಾರ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದ್ದು, ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಆಸ್ಪತ್ರೆಯಲ್ಲಿ ಲಭಿಸುವ ಚಿಕಿತ್ಸೆ ಕುರಿತು ಜನರಿಂದ ಮಾಹಿತಿ ಪಡೆದರು. ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕುಶಲೋಪರಿ ವಿಚಾರಿಸಿದರು.

ಕೆಎಂಇಆಆರ್‌ಸಿ ಅನುದಾನದಲ್ಲಿ ₹3,828 ಲಕ್ಷಗಳಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಧ್ಯಾಪಕರ ಸಭಾಂಗಣ, 300 ವಿದ್ಯಾರ್ಥಿಗಳ ಸಾಮಥ್ರ್ಯವುಳ್ಳ ಪರೀಕ್ಷಾ ಕೊಠಡಿಗಳ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಇದ್ದರು.

ಗೈರು ಹಾಜರಾದರೆ ಕ್ರಮ’ ಎಚ್ಚರಿಕೆ
‘ವಿಮ್ಸ್‌ ವೈದ್ಯರು ಮೂಲಸ್ಥಾನದಲ್ಲಿದ್ದುಕೊಂಡೇ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದ ವೇಳೆ ಗೈರಾಗಿರುವುದು ಕಂಡುಬಂದರೆ ಕ್ರಮ ಜರುಗಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಎಚ್ಚರಿಕೆ ನೀಡಿದರು. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಮ್ಸ್ ಹೆಸರಾಂತ ವೈದ್ಯಕೀಯ ಸಂಸ್ಥೆಯಾಗಿದ್ದು ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಿದರು. ವೈದ್ಯಾಧಿಕಾರಿಗಳು ಮೂಲಸ್ಥಾನದಲ್ಲಿದ್ದುಕೊಂಡು ಅವರ ಆರೈಕೆಗೆ ವಿಶೇಷ ಕಾಳಜಿ ವಹಿಸಬೇಕು. ಅವರ ಗಣಕೀಕೃತ ಹಾಜರಾತಿ ಮಾಹಿತಿ ನೀಡಬೇಕು. ಚಲನವಲನಗಳ ಬಗ್ಗೆ ನಿಗಾ ವಹಿಸಬೇಕು ಎಂದು ವಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಿದ್ಧರಾಮೇಶ್ವರ ಅವರಿಗೆ ನಿರ್ದೇಶಿಸಿದರು. ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ಒಳಚರಂಡಿ ವ್ಯವಸ್ಥೆ ನಿರ್ವಹಣೆಗೆ ಕ್ರಮ ವಹಿಸಬೇಕು. ಸಂಸ್ಥೆಯ ಆವರಣ ಸ್ವಚ್ಛವಾಗಿಟ್ಟುಕೊಳ್ಳಲು ಬೇಜವಾಬ್ದಾರಿ ಸಲ್ಲದು. ನಿರ್ವಹಣೆಗೆ ಕೊರತೆಯಿದ್ದಲ್ಲಿ ಗಮನಕ್ಕೆ ತರಬೇಕು ಎಂದು ತಿಳಿಸಿದರು. ವಿವಿಧ ವಿಭಾಗಗಳಿಗೆ ಗುಣಮಟ್ಟದ ಸಲಕರಣೆಗಳ ಅಗತ್ಯವಿದ್ದಲ್ಲಿ ಪ್ರಸ್ತಾವನೆ ನೀಡಬೇಕು. ಅಗತ್ಯ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಶವ ರವಾನೆಗೆ ಹಲೇ ವಾಹನವಲ್ಲದೇ ಸುಸಜ್ಜಿತ ಅಂಬ್ಯುಲೆನ್ಸ್  ಮೀಸಲಿರಿಸಬೇಕು ಎಂದು ಹೇಳಿದರು. ವಿಮ್ಸ್‌ನಲ್ಲಿ ಬಹಳ ದಿನಗಳಿಂದ ಎಕ್ಸ್-ರೇ ಯಂತ್ರವು ದುರಸ್ಥಿಯಾಗದೆ ಬರುವ ರೋಗಿಗಳು ಹೊರಗಡೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ರಿಪೇರಿಗೆ ಕ್ರಮ ವಹಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ನೂತನವಾಗಿ ದಂತ ವೈದ್ಯಕೀಯ ಕಾಲೇಜು ನಿರ್ಮಾಣವಾಗಿದೆ. ಹಲ್ಲಿನ ಸಮಸ್ಯೆಗಳಿಗೆ ಹಲವಾರು ಸೌಲಭ್ಯಗಳಿವೆ. ಈ ಕುರಿತು ಸಾರ್ವಜನಿಕರಿಗೆ ಹೆಚ್ಚು ಪ್ರಚಾರ ನೀಡಬೇಕು ಎಂದರು. ವಿಮ್ಸ್ ಆಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳ ಬಗ್ಗೆಸಾರ್ವಜನಿಕರಿಗೆ ಸುಲಭವಾಗಿ ತಿಳಿಯಲು ಸೂಚನಾ ಅಥವಾ ಮಾಹಿತಿ ಫಲಕಗಳನ್ನು ಪ್ರದರ್ಶಿಸಬೇಕು ಇದರಿಂದ ಹಳ್ಳಿ ಭಾಗದ ಜನರಿಗೆ ಸುಗಮವಾಗುತ್ತದೆ ಎಂದು ಆಡಳಿತ ವೈದ್ಯಾಧಿಕಾರಿಗಳಿಗೆ ಆದೇಶಿಸಿದರು. ಸಾರ್ವಜನಿಕರಿಗೆ ಗುಣಮಟ್ಟ ಚಿಕಿತ್ಸೆ ಒದಗಿಸುವ ಕ್ರಮ ಹಾಗೂ ವಿಭಾಗಗಳ ಕುಂದು-ಕೊರತೆ  ಚರ್ಚಿಸಲು ಎಲ್ಲಾ ವಿಭಾಗಗಳ ಮುಖ್ಯಸ್ಥರನ್ನೊಳಗೊಂಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ನಿರ್ದೇಶಕರಿಗೆ ಹೇಳಿದರು. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಬಾರದು ಬದಲಾಗಿ ಅದಕ್ಕೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಪಟ್ಟಿಮಾಡಿ ಪ್ರಸ್ತಾವನೆ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT