ಕುಡತಿನಿ (ತೋರಣಗಲ್ಲು): ಕುಡತಿನಿ ಪಟ್ಟಣದ ಹೊವಲಯದಲ್ಲಿನ ಎಚ್ಎಲ್ಸಿ ಕಾಲುವೆಯ ಬಳಿ ಮದುವೆ ದಿಬ್ಬಣದ ಲಾರಿಯೊಂದು ಮುಗುಚಿ ಇಬ್ಬರು ಮಹಿಳೆಯರು ಮೃತಪಟ್ಟು, ಸುಮಾರು 26 ಜನ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದೆ.
ಪಟ್ಟಣಸೆರಗು ಗ್ರಾಮದ ಮಹಿಳೆ ಮಾರೆಮ್ಮ(45) ಸ್ಥಳದಲ್ಲೆ ಮೃತಪಟ್ಟರೆ ಅದೇ ಗ್ರಾಮದ ಮತ್ತೊಬ್ಬ ಮಹಿಳೆ ಭಾಗ್ಯಮ್ಮ(55) ಬಳ್ಳಾರಿಯ ವಿಮ್ಸ್ಗೆ ತೆರಳುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕುರುಗೋಡು ತಾಲ್ಲೂಕಿನ ಪಟ್ಟಣಸೆರಗು ಗ್ರಾಮದ ಸುಮಾರು 50ಕ್ಕೂ ಹೆಚ್ಚು ಜನ ಆಂದ್ರಪ್ರದೇಶದಲ್ಲಿನ ಕೆರೆನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಸ್ವಗ್ರಾಮಕ್ಕೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರಿಗೆ ಕುಡತಿನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ಗೆ ದಾಖಲಿಸಲಾಗಿದೆ.
ಕುರುಗೋಡು ಠಾಣೆಯ ಪಿಎಸ್ಐ ವಿರೇಶಪ್ಪ, ಕುಡತಿನಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು, ಪರಿಶೀಲಿಸಿ ಸ್ಥಳದಲ್ಲಿದ್ದ ಜನರಿಂದ ಸಮಗ್ರ ಮಾಹಿತಿ ಪಡೆದುಕೊಂಡರು.
ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಕಾಂಗ್ರೆಸ್ನ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು.
ನಂತರ ವಿಮ್ಸ್ನ ನಿರ್ದೇಶಕ ಗಂಗಾಧರಗೌಡ ಅವರಿಗೆ ದೂರವಾಣಿ ಕರೆ ಮಾಡಿ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕುರುಗೋಡು ವೃತ್ತದ ಸಿಪಿಐ ವಿಶ್ವನಾಥ ಹಿರೇಗೌಡ ತಿಳಿಸಿದ್ದಾರೆ.
ಕುಡತಿನಿಯ ಹೊರವಲಯದಲ್ಲಿನ ಎಚ್ಎಲ್ಸಿ ಕಾಲುವೆಯ ಬಳಿ ಭಾನುವಾರ ಮದುವೆ ದಿಬ್ಬಣದ ಲಾರಿಯ ಮುಗಚಿ ಬಿದ್ದಿ ಸ್ಥಳಕ್ಕೆ ಕಾಂಗ್ರೆಸ್ ನ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಭೇಟಿ ನೀಡಿ ಪರಿಶಿಲಿಸಿದರು