ತೂಬಗೆರೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಹುಂಡಿಯಲ್ಲಿನ ಹಣ ಎಣಿಕೆ ವೇಳೆ ಪ್ರೇಮಿಯೊಬ್ಬ ರಕ್ತದಲ್ಲಿ ಬರೆದಿರುವ ಪ್ರೇಮ ಪತ್ರ ದೊರೆತಿದೆ.
ತಾನು ಪ್ರೀತಿಸುತ್ತಿರುವ ಹುಡುಗಿಯೇ ಜೋಡಿಯಾಗುವಂತೆ ದೇವರಿಗೆ ಪತ್ರದ ಮೂಲಕ ಹರಕೆ ಮಾಡಿಕೊಂಡಿದ್ದಾನೆ. ಪ್ರೇಮಿಗಳಿಬ್ಬರು ಜೋಡಿಯಾಗಿ ಇರುವ ಫೋಟೊ ಇದ್ದು, ಅದರ ಹಿಂಬದಿಯಲ್ಲಿ ಪ್ರೇಮಿ ನಿವೇದಿಸಿಕೊಂಡಿರುವ ಒಕ್ಕಣೆ ಇದೆ.
ರಥೋತ್ಸವದ ನಂತರ ನಡೆದ ಘಾಟಿ ದೇಗುಲದಲ್ಲಿ ಸೋಮವಾರ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು ₹85 ಲಕ್ಷ ಸಂಗ್ರಹವಾಗಿದೆ. ಇದರೊಂದಿಗೆ ₹52,350 ಮೌಲ್ಯದ 11 ಗ್ರಾಂ 900 ಮಿಲಿ ಚಿನ್ನ, ₹72,100 ಮೌಲ್ಯದ 5 ಕೆ.ಜಿ 50 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.
ಎಣಿಕೆ ವೇಳೆ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ. ಹೇಮಾವತಿ, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಡಿ. ನಾಗರಾಜ್, ಪ್ರಧಾನ ಅರ್ಚಕ ಎಸ್.ಎನ್. ಸುಬ್ಬಕೃಷ್ಣಶಾಸ್ತ್ರಿ, ದೇವಾಲಯದ ಅಧೀಕ್ಷಕ ರಘು ಹುಚ್ಚಪ್ಪ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸರು ಇದ್ದರು.