ದೊಡ್ಡಬಳ್ಳಾಪುರ: ಕಸಬಾ ವ್ಯಾಪ್ತಿಯ ರಾಜಸ್ವ ನಿರೀಕ್ಷಕ (ಆರ್ಐ) ಲಕ್ಷ್ಮೀನರಸಿಂಹ ಅವರ ಮನೆಯ ಮೇಲೆ ಬುಧವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸಿಬಿ ಡಿವೈಎಸ್ಪಿ ಜಗದೀಶ್ ನೇತೃತ್ವದ 29 ಜನರ ತಂಡ ನಗರದಲ್ಲಿನ ಕುಚ್ಚಪ್ಪನ ಪೇಟೆಯಲ್ಲಿರುವ ಲಕ್ಷ್ಮೀನರಸಿಂಹ ಅವರ ಮನೆಗೆ ಬೆಳಿಗ್ಗೆ 6ಗಂಟೆ ಸುಮಾರಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದೆ.
ಲಕ್ಷ್ಮೀನರಸಿಂಹ ಅವರು ಸುಮಾರು 15 ವರ್ಷಗಳಿಂದ ನಗರ ಹಾಗೂ ಬಾಶೇಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಎಸಿಬಿ ಅಧಿಕಾರಿಗಳ ತಂಡ ಲಕ್ಷ್ಮೀನರಸಿಂಹ ಅವರ ಮನೆಯಲ್ಲಿ ಚಿನ್ನ, ಬೆಳ್ಳಿ, ನಗದು ಹಾಗೂ ಜಮೀನು, ಮನೆಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿನ ಲಕ್ಷ್ಮೀನರಸಿಂಹ ಅವರ ಕಚೇರಿ ಸೇರಿದಂತೆ 4 ಕಡೆಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.