ವಿಜಯಪುರ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅದರ ಪರಿಣಾಮ ರಾಜ್ಯದಲ್ಲಿ ಬೀರಲಿದೆ. ಬದಲಾವಣೆ ಆಗುವ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಬಿ.ಎನ್.ಬಚ್ಚೇಗೌಡ ಹೇಳಿದರು.
ಇಲ್ಲಿ ಗಂಗಾತಾಯಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದು ಖಚಿತ. ಕೋಲಾರದಲ್ಲಿ ಮುನಿಸ್ವಾಮಿ, ಚಿಕ್ಕಬಳ್ಳಾಪುರದಲ್ಲಿ ನಾನು ಗೆಲ್ಲುವುದು ನಿಶ್ಚಿತ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ. ದೇಶಕ್ಕೆ ಮೋದಿ ಅವಶ್ಯಕತೆ ಜಾಸ್ತಿ ಇದೆ. ಮಾಧ್ಯಮಗಳಲ್ಲಿನ ಸಮೀಕ್ಷೆಗಳ ಆಧಾರದಲ್ಲಿ ಹೇಳುತ್ತಿದ್ದೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಸಮ್ಮಿಶ್ರ ಸರ್ಕಾರದಲ್ಲಿ ದಿನಾ ಕಚ್ಚಾಟಗಳು ಆಗುತ್ತಿವೆ. ಅವರಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಆಗುತ್ತಿಲ್ಲ. ಹೆಚ್ಚು ದಿನ ಉಳಿಯುವ ಸಾಧ್ಯತೆ ಇಲ್ಲ. ಮತ ಎಣಿಕೆ ಆದ ಮೇಲೆ ಸಮ್ಮಿಶ್ರ ಸರ್ಕಾರ ಇರುವುದಿಲ್ಲ’ ಎಂದರು.
ಪುರಸಭಾ ಸದಸ್ಯರಾದ ಎಂ.ಸತೀಶ್ ಕುಮಾರ್, ಬಲಮುರಿ ಶ್ರೀನಿವಾಸ್, ಮುಖಂಡರಾದ ರಾಜಣ್ಣ, ಚ.ವಿಜಯಬಾಬು, ಕನಕರಾಜು, ರವಿಕುಮಾರ್, ಗಂಗಾತಾಯಿ ದೇವಾಲಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಇದ್ದರು.