ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ವಿಷಯವಾದ ಎತ್ತಿನಹೊಳೆ: ಆರ್.ಅಂಜನೇಯರೆಡ್ಡಿ ಆಕ್ರೋಶ

Last Updated 14 ಏಪ್ರಿಲ್ 2019, 13:38 IST
ಅಕ್ಷರ ಗಾತ್ರ

ದೇವನಹಳ್ಳಿ: ಬಯಲುಸೀಮೆಗೆ ನೀರು ಕೊಡುವವರಿಗೆ ಚಿಂತಿಸಿ ಮತ ನೀಡಿ ಎಂದು ಶಾಶ್ವತ ನೀರಾವರಿ ಹೊರಾಟ ಸಮಿತಿ ಅಧ್ಯಕ್ಷ ಆರ್.ಅಂಜನೇಯರೆಡ್ಡಿ ಹೇಳಿದರು.

ಇಲ್ಲಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ‘ಮತ ನಮ್ಮ ಹಕ್ಕು, ನೀರು ನಮ್ಮ ಭವಿಷ್ಯ’ ಕುರಿತು ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಬಯಲು ಸೀಮೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪುಗೊಳ್ಳಲೇ ಇಲ್ಲ. ಸತತ ಮೂವತ್ತು ವರ್ಷಗಳಿಂದ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮುಖಂಡರು ಎತ್ತಿನಹೊಳೆ ಯೋಜನೆ, ಕೃಷ್ಣ ಬಿ.ಸ್ಕೀಂ ಯೋಜನೆ ತರುವುದಾಗಿ ಭರವಸೆ ನೀಡುತ್ತಲೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಭರವಸೆ: 2009ರಲ್ಲಿ ಎತ್ತಿನಹೊಳೆ ಯೋಜನೆ ರಾಜಕೀಯ ಉದ್ದೇಶದಿಂದ ಜಾರಿ ಮಾಡಲಾಗಿದೆಯೇ ಹೊರತು ಶಾಶ್ವತ ಪರಿಹಾರ ಸಾಧ್ಯವಿಲ್ಲ. ಎರಡು ವರ್ಷಕ್ಕೆ ನೀರು ಹರಿಸಲಾಗುವುದೆಂದು ಹೇಳಿ ಹತ್ತು ವರ್ಷ ಕಳೆದಿದೆ ಎಂದರು.

ಹೈಡ್ರಾಲಾಜಿ ವರದಿ ಅನ್ವಯ ನೀರಿನ ಪ್ರಮಾಣ ಕಡಿಮೆ ಸಿಗಲಿದೆ. ಬಯಲು ಸೀಮೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 5,400 ಕೆರೆಗಳಿವೆ. ನೀರು ಹರಿಯುವುದು ಕನಸಿನ ಮಾತು ಎಂದರು.

ಜಿ.ಎಸ್.ಪರಮಶಿವಯ್ಯ ವರದಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಕ್ರಿಯಾಯೋಜನೆ ರೂಪಿಸಿದ್ದರೆ, ಶಾಶ್ವತ ಪರಿಹಾರ ಸಿಗುತ್ತಿತ್ತು. ಸರ್ಕಾರ ನಿರ್ಲಕ್ಷ್ಯ ವಹಿಸಿದ ಪರಿಣಾಮ ಶಾಶ್ವತ ಪರಿಹಾರ ಕಾರ್ಯಗತವಾಗಲಿಲ್ಲ ಎಂದು ದೂರಿದರು.

ಸರ್ಕಾರ ಕೆ.ಸಿವ್ಯಾಲಿ ಮತ್ತು ಎನ್.ಎಚ್.ವ್ಯಾಲಿ ಯೋಜನೆಯಡಿ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ಹರಿಸಲು ₹2,100ಕೋಟಿ ವೆಚ್ಚ ಮಾಡಲಾಗುತ್ತಿದೆ. ವಿಷಯುಕ್ತ ನೀರು ಕೆರೆಗಳಿಗೆ ಹರಿಸುವುದು ಬೇಡ. ಭವಿಷ್ಯದಲ್ಲಿ ಜನ ಜಾನುವಾರುಗಳಿಗೆ ಮಾರಕವಾಗಲಿದೆ. ಇದರ ವಿರುದ್ಧ ಕಾನೂನು ಹೋರಾಟ ಮುಂದುವರೆದಿದೆ. ನಮ್ಮ ಹೋರಾಟ ಕುಡಿಯುವ ಶುದ್ಧ ನೀರಿಗಾಗಿಯೇ ಹೊರತು; ಯಾವುದೇ ಪಕ್ಷದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

ಮುಖಂಡ ಮರಳೂರು ಹರೀಶ್, ನಾಗದೇನಹಳ್ಳಿ ನಾರಾಯಣಸ್ವಾಮಿ, ಮನೋಹರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT