ದೊಡ್ಡಬಳ್ಳಾಪುರ: ತೆಂಗಿನ ಮರಗಳಿಗೆ ಕಾಡಿಗೆ ರೋಗ (ತೆಂಗಿನ ಗರಿಗಳ ಮೇಲೆ ಕಪ್ಪು ಚಕ್ಕೆ ಕಟ್ಟುವುದು) ಹಾಗೂ ಬಿಳಿ ನೊಣಗಳ ಹಾವಳಿಗೆ ತುತ್ತಾಗಿ ಗರಿಗಳು ಬೀಳತೊಡಗಿವೆ. ಇದರಿಂದ ತೆಂಗು ಬೆಳೆಗಾರರು ಕಂಗಾಲುಗೊಂಡಿದ್ದಾರೆ.
ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ತೆಂಗು ಅಗ್ರಸ್ಥಾನ ಪಡೆದಿದೆ. ದಿನನಿತ್ಯದ ಬಳಕೆಗಾಗಿ ಮನೆ ಮುಂದೆ ಒಂದು ಸಸಿ ಬೆಳೆಸಿಕೊಳ್ಳುವುದರಿಂದ ಮೊದಲುಗೊಂಡು ಹತ್ತಾರು ಎಕರೆವರೆಗೂ ತೆಂಗು ಬೆಳೆದಿರುವ ತೋಟಗಳನ್ನು ಕಾಣಬಹುದಾಗಿದೆ. ಒಂದು ದಶಕದಿಂದ ಈಚೆಗೆ ನುಸಿಪೀಡೆ ರೋಗದಿಂದ ತೆಂಗಿನ ಪಿಂದಿಗಳು ಉದುರಿ ಹೋಗುತ್ತಿದ್ದವು. ಈಗ ಮರದ ಬೆಳವಣಿಗೆಗೆ ಸಹಕಾರಿಯಾಗಿರುವ ತೆಂಗಿನ ಗರಿಗಳೇ ಬಿಳಿ ನೊಣಗಳ ಹಾವಳಿಯಿಂದಾಗಿ ಗರಿಗಳು ಒಣಗಿ ನಿಧಾನವಾಗಿ ಬಿದ್ದು ಹೋಗುತ್ತಿವೆ.
‘ತೆಂಗಿನ ಗರಿ ಮೇಲ್ಭಾಗದಲ್ಲಿ ಮಸಿ ಬಳಿದಂತೆ ಗರಿಗಳು ಕಪ್ಪಾಗಿವೆ. ಗರಿ ಕೈಲ್ಲಿ ಮುಟ್ಟಿದರೆ ಸಾಕು ಕೈಯಲ್ಲ ಕಪ್ಪಾಗುತ್ತದೆ. ಗರಿ ಮೇಲೆ ಇರುವ ಕಪ್ಪನ್ನು ಬಿಸಿಲು ಸಮಯದಲ್ಲಿ ಮುಟ್ಟಿದರೆ ಚಕ್ಕೆಯಂತೆ ಪುಡಿಯಾಗುತ್ತದೆ. ಇನ್ನು ಗರಿ ತಳಭಾಗದಲ್ಲಿ ಸಣ್ಣ–ಸಣ್ಣ ಬಿಳಿ ನೊಣಗಳು ಗೂಡು ಕಟ್ಟಿದ್ದು ಗರಿ ತಳಭಾಗದಲ್ಲಿನ ಹಸಿರು ಕೆರೆದು ತಿನ್ನುತ್ತವೆ. ಗರಿಯಲ್ಲಿನ ಹಸಿರು ಖಾಲಿಯಾಗುತಿದ್ದಂತೆ ಮತ್ತೊಂದು ಗರಿಗೆ ಲಗ್ಗೆ ಹಿಡುತ್ತಿವೆ. ತೆಂಗಿನ ಗರಿ ಕೈಯಲ್ಲಿ ಹಿಡಿದು ಹಲುಗಾಡಿಸಿದರೆ ಗರಿಯಲ್ಲಿನ ಬಿಳಿನೊಣಗಳು ಮೈಮೇಲೆ ಬಿದ್ದು ನವೆ, ಕೆರೆತ ಆರಂಭವಾಗುತ್ತದೆ ಎನ್ನುತ್ತಾರೆ ಅರಳುಮಲ್ಲಿಗೆ ತೆಂಗು ಬೆಳೆಗಾರ ಬೈರೇಗೌಡ.
ಗರಿ ಮೇಲಿನ ಕಪ್ಪು ಹಾಗೂ ಗರಿ ತಳಭಾಗದಲ್ಲಿ ಬಿಳಿನೊಣಗಳ ಹಾವಳಿಯಿಂದ ಇಡೀ ತೋಟದ ಮರದ ತಳಭಾಗದ ಎರಡು ಸುತ್ತಿನ ತೆಂಗಿನ ಗರಿಗಳು ಜೋತು ಬಿದ್ದಿವೆ. ಇದು ಹೀಗೆಯೇ ಮುಂದುವರಿದರೆ ಒಂದೆರೆಡು ತಿಂಗಳಲ್ಲಿ ಮರದಲ್ಲಿನ ಎಲ್ಲ ಗರಿಗಳಿಗೂ ರೋಗ ಆವರಿಸಿ ಇಡೀ ಮರವೇ ಒಣಗುವ ಅಥವಾ ಇಳುವರಿ ತೀವ್ರವಾಗಿ ಕುಸಿತವಾಗುವ ಅಪಾಯ ಎದುರಾಗಿದೆ ಎನ್ನುವ ಆತಂಕ ತೆಂಗು ಬೆಳೆಗಾರರದ್ದು.
ಔಷಧ ಸಿಂಪಡಣೆ ಕ್ರಮ ಸಾಧ್ಯವಾದಷ್ಟು ತೆಂಗಿನ ತೋಟ ಇರುವ ಅಕ್ಕಪಕ್ಕದ ರೈತರು ಸೇರಿ ಸಾಮೂಹಿಕವಾಗಿ ಸಿಂಪಡಣೆ ಮಾಡಿದರೆ ರೋಗ ನಿವಾರಣೆ ಸುಲಭವಾಗುತ್ತದೆ. ಇಡೀ ಗ್ರಾಮದಲ್ಲಿ ಒಂದಿಬ್ಬರು ರೈತರು ಮಾತ್ರ ಔಷಧಿ ಸಿಂಪಡಣೆ ಮಾಡಿದರೆ ಸಂಪೂರ್ಣವಾಗಿ ರೋಗ ಮತ್ತು ಹುಳುಗಳ ನಿಯಂತ್ರಣ ಕಷ್ಟವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.