ಆನೇಕಲ್: ಬೊಮ್ಮಸಂದ್ರ ಕೈಗಾರಿಕಾ ಸಂಘದ ಐದು ಸಾವಿರ ಕಾರ್ಮಿಕರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಕಾರ್ಮಿಕರು ಕೈಗಾರಿಕೆಗಳ ಆಸ್ತಿ. ಹಾಗಾಗಿ ಅವರ ಆರೋಗ್ಯದ ರಕ್ಷಣೆ ಮಾಡುವುದು ನಮ್ಮ ಬದ್ಧತೆಯಾಗಿದೆ ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್ ತಿಳಿಸಿದರು.
ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಕಾರ್ಮಿಕರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘದಿಂದ ನಾರಾಯಣ ಹೃದಯಾಲಯದ ಮೂಲಕ ಐದು ಸಾವಿರ ಮಂದಿ ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಲಸಿಕೆ ವೆಚ್ಚವನ್ನು ಆಯಾ ಕಾರ್ಖಾನೆಗಳು ಭರಿಸಲಿವೆ. ಹಾಗಾಗಿ, ಕಾಯಂ ಕೇಂದ್ರವನ್ನು ಸಂಘದ ಕಚೇರಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಸಂಘವು ಕೊರೊನಾ ಸಂದರ್ಭದಲ್ಲಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಕೊಂಡಿದೆ. ಎರಡು ಸಾವಿರ ಆರೋಗ್ಯ ಕಿಟ್ಗಳನ್ನು ಸೋಂಕಿತರಿಗೆ ನೀಡಲಾಗಿದೆ. ಸಂಘದ ಮೂಲಕ 330 ಆಮ್ಲಜನಕ ಕಾನ್ಸನ್ಟ್ರೇಟರ್ಗಳು ಮತ್ತು 220 ಬೈಪ್ಯಾಕ್ಗಳನ್ನು ಗ್ರಾಮಾಂತರ ಭಾಗದ ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದರು.
ಅಪೋಟೆಕ್ಸ್ ಕಾರ್ಖಾನೆಯ ನಿರ್ದೇಶಕ ಯೋಗಾಂಜನೇಯ ರೆಡ್ಡಿ, ಬೊಮ್ಮಸಂದ್ರ ಕೈಗಾರಿಕಾ ಸಂಘವು ಕ್ರಿಯಾಶೀಲ ಕಾರ್ಯಕ್ರಮಗಳ ಮೂಲಕ ಕೈಗಾರಿಕಾ ಮಾಲೀಕರ ಮತ್ತು ಕಾರ್ಮಿಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಕಳೆದ 15 ವರ್ಷಗಳಿಂದ ಸೊರಗಿದ್ದ ಸಂಘವು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಚೈತನ್ಯ ಪಡೆದಿದೆ ಎಂದು ತಿಳಿಸಿದರು.