ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಕೆರೆಗಳ ಅಭಿವೃದ್ಧಿಗೆ ಪ್ರೇರಣೆಯಾಗಲಿದೆ ದೇವನಹಳ್ಳಿಯ ಈ ಕೆರೆ

Last Updated 4 ಜುಲೈ 2020, 3:11 IST
ಅಕ್ಷರ ಗಾತ್ರ

ದೇವನಹಳ್ಳಿ: ಭಾರತದೇಶದಲ್ಲಿ ಮುಂದಿನ ದಿನಗಳಲ್ಲಿ 10 ಸಾವಿರ ಕೆರೆಗಳ ಅಭಿವೃದ್ಧಿಗೆ ತಾಲ್ಲೂಕಿನ ಕೊಯಿರಾ ಕೆರೆ ಪ್ರೇರಣೆಯ ಜೊತೆಗೆ ಮಾದರಿಯನ್ನಾಗಿ ರೋಟರಿ ಸಂಸ್ಥೆ ಗುರುತಿಸಿದೆ ಎಂದು ರೋಟರಿ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿನ ಕೊಯಿರಾ ಕೆರೆಯ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಪದಾಧಿಕಾರಿಗಳು, ‘ಬಯಲು ಸೀಮೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಶಾಶ್ವತ ಯೋಜನೆಗಳಿಲ್ಲ. ಜನ ಜಾನುವಾರುಗಳ ಪರಿಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜೀವ ಜಲ ಮತ್ತು ಪರಿಸರ ಸಂರಕ್ಷಣೆ ಎರಡನ್ನು ಸಮತೋಲನವನ್ನಾಗಿ ಕಾಯ್ದುಕೊಳ್ಳುವ ಗುರುತರ ಜವಾಬ್ದಾರಿ ಸ್ಥಳೀಯ ಗ್ರಾಮಸ್ಥರಿಗೂ ಇರಬೇಕು ಸಂಘ ಸಂಸ್ಥೆಗಳ ಸಹಕಾರ ಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ’ ಎಂದು ಹೇಳಿದರು.

ಕೆರೆ ಅಭಿವೃದ್ಧಿಯ ಚಿಂತನೆ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಚಿಕ್ಕೇಗೌಡ, ‘2019ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ತಾಲ್ಲೂಕಿನಲ್ಲಿ ದಾನಿಗಳಿಂದ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಹತ್ತಾರು ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಮಾಹಿತಿ ಮೇರೆಗೆ ಅವರನ್ನು ಭೇಟಿ ಮಾಡಿ ಕೊಯಿರಾ ಕೆರೆ ಅಭಿವೃದ್ಧಿಪಡಿಸಲು ಸಹಕರಿಸುವಂತೆ ಮನವಿ ಮಾಡಿದೆವು. ತಕ್ಷಣ ವೈಯಕ್ತಿಕ ಹಣ ನೀಡಿ ಕಾಮಗಾರಿ ಆರಂಭಿಸಿ ಎಂದು ಹೇಳಿದರು’ ಎಂದು ನೆನಪಿಸಿಕೊಂಡರು.

‘ಗ್ರಾಮಸ್ಥರೆಲ್ಲರೂ ಸೇರಿ ₹ 3.10 ಲಕ್ಷ ಕ್ರೋಡೀಕರಿಸಿ ಹೂಳು ಎತ್ತಲು ಆರಂಭಿಸಿದೆವು. ಹಣದ ಕೊರತೆಯಾದಾಗ ಬೆಂಗಳೂರು ರಾಜ್‌ಮಹಲ್‌ ವಿಲಾಸ್ ರೋಟರಿ ಸಂಸ್ಥೆಯನ್ನು ಸಂಪರ್ಕಿಸಿದಾಗ ಅವರು ಬಂದು ಕೆರೆ ವೀಕ್ಷಿಸಿ ಜಿಲ್ಲಾಧಿಕಾರಿಯಿಂದ ಕಾಮಗಾರಿಗೆ ಅನುಮತಿ ಪಡೆದು ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಅದರನ್ವಯ 70ಲಕ್ಷ ವೆಚ್ಚಮಾಡಲು ಮುಂದೆ ಬಂದಿದ್ದಾರೆ’ ಎಂದು ವಿವರಿಸಿದರು.

‘ನಂದಿಬೆಟ್ಟದ ತಪ್ಪಲಿನಲ್ಲಿ ಜನ್ಮತಾಳುವ ಅರ್ಕಾವತಿ ನದಿಯ ಮೊದಲು ತನ್ನ ಹೆಜ್ಜೆಯನ್ನಿಟ್ಟು ತುಂಬುವ ಮೊದಲ ಕೆರೆ ಕೊಯಿರಾ. ಇದಾದ ನಂತರ ರಾಮನಾಥಪುರ, ಅರುವನಹಳ್ಳಿ, ದೊಡ್ಡಗೊಲ್ಲಹಳ್ಳಿ ಕೆರೆಗಳಿಗೆ ದಾಂಗುಡಿ ಇಡುತ್ತದೆ. ಕೆರೆ 19.20 ಎಕರೆ ವ್ಯಾಪ್ತಿ ಹೊಂದಿದ್ದರೂ ಕೆರೆ ಏರಿ ಹೊರತುಪಡಿಸಿ ಸುತ್ತಲು ಬಂಡ್ ರಿಂಗ್ ನಿರ್ಮಾಣ ಮಾಡಿರುವುದರಿಂದ ಮತ್ತು ಕೆರೆಯಂಗಳದಲ್ಲಿ ಹೂಳು ತೆಗೆದಿರುವುದರಿಂದ ಮಳೆ ನೀರು ತುಂಬಿದರೆ 18 ರಿಂದ 20 ಅಡಿಯವರೆಗೆ ನೀರು ನಿಲ್ಲುತ್ತದೆ ಬಂಡ್ ಇರುವ ಕಡೆ ಕಲ್ಲು ಜೋಡಣೆ ಮಾಡಬೇಕು. ಮಳೆ ಬಂದಿರುವುದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮಳೆ ನೀರು ಹರಿದುಬರುವ ಫೀಡರ್ ಚಾನಲ್‌ಗಳಲ್ಲಿನ ಹೂಳು ತೆಗೆದು ಸರಾಗವಾಗಿ ಕೆರೆಗೆ ನೀರು ಹರಿದು ಬರುವಂತೆ ಮಾಡಲಾಗಿದೆ. ಕೆರೆಯಂಗಳದಲ್ಲಿ ನೀರು ನಿಲ್ಲುವ ಜಾಗವನ್ನು ಹೊರತುಪಡಿಸಿ ಖಾಲಿ ಜಾಗದಲ್ಲಿ ಈಗಾಗಲೇ ಬಿದಿರು, ನೇರಳೆ, ಹೆಬ್ಬೇವು ವಿವಿಧ ಜಾತಿಯ ನೂರು ಸಸಿಗಳನ್ನು ಮೊದಲ ಹಂತದಲ್ಲಿ ನೆಟ್ಟು ಬೆಳೆಸಲಾಗುತ್ತಿದೆ’ ಎನ್ನುತ್ತಾರೆ ರೋಟರಿ ಸಂಸ್ಥೆ ಪದಾಧಿಕಾರಿಗಳು.

‘₹ 70 ಲಕ್ಷ ವೆಚ್ಚ ಮಾಡಲಾಗುತ್ತಿದೆ ಎಂದರೆ ಬರಿಯ ಒಂದು ಉದ್ದೇಶಕ್ಕೆ ಸಿಮಿತವಾಗಿ ಅಲ್ಲ. ಗ್ರಾಮಕ್ಕೆ ಕುಡಿಯುವ ನೀರಿನ ಕೊರತೆ ಇದೆ ಈ ಕೊಯಿರಾ ಕೆರೆಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸಿ ವರದಿಯನ್ನು ಪಡೆದುಕೊಳ್ಳಲಾಗಿದೆ. ನೀರಿನಲ್ಲಿ ಕಲ್ಮಶ ಇಲ್ಲ. ಜೊತೆಗೆ ಈ ಕೆರೆ ಗ್ರಾಮದಿಂದ ಸ್ವಲ್ಪ ದೂರ ಇರುವುದರಿಂದ ಯಾವುದೆ ತ್ಯಾಜ್ಯ ನೀರು ಕೆರೆಗೆ ಹರಿದು ಬರುವುದಿಲ್ಲ. ಇದೊಂದು ಪರಿಶುದ್ಧ ನೀರು ಆದರೂ ಒಂದು ಬಾರಿ ಶುದ್ಧಿಕರಿಸಿ ಕುಡಿಯಲು ವ್ಯವಸ್ಥೆ ಮಾಡಿದರೆ ಈ ಒಂದು ಕೆರೆ ನೀರು ಇಡಿ ವರ್ಷ ಗ್ರಾಮಕ್ಕೆ ಸಾಕಾಗುತ್ತದೆ ಅದರ ಬಗ್ಗೆಯು ಚಿಂತನೆ ಇದೆ’ ಎಂದು ಪದಾಧಿಕಾರಿಗಳು ಹೇಳಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಸಂಜಯ್ ಕೃಷ್ಣ ಮಾಹಿತಿ ನೀಡಿ, ‘ಮೊದಲ ಬಾರಿಗೆ ಕೆರೆಯನ್ನು ನೋಡಿದಾಗ ದಾರುಣ ಸ್ಥಿತಿಯಲ್ಲಿತ್ತು. ನಮ್ಮ ಸಂಸ್ಥೆ ಪದಾಧಿಕಾರಿಗಳನ್ನು ನಾಲ್ಕಾರು ಬಾರಿ ಕರೆದುಕೊಂಡು ಬಂದು ತೋರಿಸಿ ಇದಕ್ಕೆ ಪರಿಹಾರತ್ಮಕ ಕೆಲಸ ಮಾಡಲೇಬೇಕು ಎಂದು ತಿರ್ಮಾನಿಸಿ ಗ್ರಾಮಸ್ಥರು ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿಗೆ ಕೈ ಹಾಕುತ್ತೇವೆ ಎಂದು ಹೇಳಿದಾಗ ಅವರೆಲ್ಲ ಸಹಕರಿಸುವುದರ ಜತೆಗೆ ಒತ್ತುವರಿಯಾಗಿದ್ದ 8 ರಿಂದ 9 ಎಕರೆಯನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ’ ಎಂದು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯ ಪ್ರತಿಯೊಂದು ಛಾಯಾಚಿತ್ರವನ್ನು ಅಂತರ ರಾಷ್ಟ್ರೀಯ ರೋಟರಿ ಸಂಸ್ಥೆಗೆ ಕಳುಹಿಸಿದಾಗ ಉತ್ತಮ ಪ್ರತಿಕ್ರಿಯೆ ಬಂದಿದೆ. 2025ರೊಳಗೆ ಭಾರತದಲ್ಲಿ 10 ಸಾವಿರ ಕೆರೆಗಳ ಅಭಿವೃದ್ಧಿಗೆ ಕ್ರಮದ ಜೊತೆಗೆ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅಧ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

‘ಮೊದಲ ಹಂತದ ಕಾಮಗಾರಿ ಮುಗಿದಿದೆ. ಎರಡನೇ ಹಂತದ ಕಾಮಗಾರಿ ಮಳೆ ಬಿಡುವು ನೋಡಿಕೊಂಡು ಆರಂಭಿಸಲಾಗುತ್ತಿದೆ. ಹಣ ನೀಡುವುದು ನಮ್ಮ ಜವಾಬ್ದಾರಿ. ಉಸ್ತುವಾರಿಗೆ ಸ್ಥಳೀಯ ಗ್ರಾಮದ 15 ಸದಸ್ಯರನ್ನೊಳಗೊಂಡು ರೋಟರಿ ಸಮುದಾಯ ಕಾವಲು ಪಡೆಯನ್ನು ರಚಿಸಲಾಗಿದೆ. ಅಧ್ಯಕ್ಷರನ್ನಾಗಿ ಸ್ಥಳೀಯರ ಗ್ರಾಮದ ಚಂದ್ರಶೇಖರ್ ಎಂಬುವವರನ್ನು ನೇಮಕ ಮಾಡಲಾಗಿದ್ದು ಯುವಕರು ಪ್ರಾಮಾಣಿಕತೆಯಿಂದ ಸಹಕರಿಸುತಿದ್ದಾರೆ. ಅವರೇ ನೋಡಿಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಕೊಯಿರಾ ಕೆರೆ ಕಾಮಗಾರಿ ಪೂರ್ಣಗೊಂಡ ನಂತರ ರಾಮನಾಥಪುರ ಕೆರೆ ಪರಿಶೀಲನೆ ನಡೆಸುತ್ತೇವೆ ಕೊಟಿ ಸಸಿ ನೆಡುವ ಅಭಿಯಾನವನ್ನು ಕೊರೊನದಿಂದ ಮುಂದೂಡಲಾಗಿದೆ. ಪ್ರಕೃತಿ ನಮಗೆ ಬೇಕಾದಷ್ಟು ನೀಡಿದೆ. ನಾವು ಪ್ರಕೃತಿಗೆ ಏನಾದರೂ ಕಿರು ಕೊಡುಗೆ ನೀಡಿದರೆ ಪೀಳಿಗೆಗೆ ಅನುಕೂಲವಲ್ಲವೇ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT