ಸೂಲಿಬೆಲೆ: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಮದಗದಮ್ಮ, ಮಹೇಶ್ವರಮ್ಮ ದೇವಿಯ ಮೂರು ದಿನಗಳ ಜಾತ್ರೆ ಮಹೋತ್ಸವ ಹಮ್ಮಿಕೊಂಡಿದ್ದು ದೀಪೋತ್ಸವ ನಡೆಯಿತು.
ಗ್ರಾಮದಲ್ಲಿರುವ ಮದಗದಮ್ಮ ದೇವಿಯ ದೇಗುಲ ಜೀರ್ಣೋದ್ಧಾರ ಕಾರ್ಯ ಮುಗಿದ ನಂತರ ಜಾತ್ರೆ ಮಹೋತ್ಸವವನ್ನು ಗ್ರಾಮಸ್ಥರು ಆಯೋಜಿಸಿದ್ದು, ಸೋಮವಾರ ನಾನಾ ಪೂಜಾ ಕಾರ್ಯಕ್ರಮಗಳು ನಡೆದವು.
ದೇವರಿಗೆ ವಿಶೇಷವಾಗಿ ಹೂವಿನ ಮತ್ತು ವಿದ್ಯುತ್ ದೀಪದ ಅಲಂಕಾರ ಮಾಡಲಾಗಿತ್ತು. ಮಂಗಳವಾರ ದೀಪೋತ್ಸವದ ಅಂಗವಾಗಿ ನೂರಾರು ಮಹಿಳೆಯರು ದೀಪಗಳನ್ನು ಹೊತ್ತು ಗ್ರಾಮದೆಲ್ಲಡೆ ಮೆರವಣೆಗೆ ಮಾಡಿ ದೇವರಿಗೆ ಅರ್ಪಿಸಿದರು.
ಮದಗದಮ್ಮ ದೇಗುಲದ ಮುಂದೆ ಅಗ್ನಿಕುಂಡದಲ್ಲಿ ನಡೆದು ಭಕ್ತರು ಹರಕೆ ತೀರಿಸಿದರು. ಅಂಬೇಡ್ಕರ್ ನಗರದ ಹಿರಿಯ ಮುಖಂಡರು ಸೇರಿದಂತೆ ದೀಪೋತ್ಸವದಲ್ಲಿ ಸುತ್ತಲಿನ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.