ಸೂಲಿಬೆಲೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಶಾಸಕ ಶರತ್ ಬಚ್ಚೇಗೌಡ ಅವರ ಅಭಿಮಾನಿಗಳು ಧರ್ಮಸ್ಥಳ ಕ್ಷೇತ್ರಕ್ಕೆ ಅಕ್ಕಿ, ದವಸ ಧಾನ್ಯಗಳನ್ನು ನೀಡುವ ಮೂಲಕ ಹರಕೆ ತೀರಿಸಿದರು.
ಭಾನುವಾರ ಸ್ವಗ್ರಾಮ ಬೆಂಡಿಗಾನಹಳ್ಳಿಯಲ್ಲಿ ದವಸ ಧಾನ್ಯ ತುಂಬಿ, ಧರ್ಮಸ್ಥಳಕ್ಕೆ ಹೊರಟ ವಾಹನಗಳಿಗೆ ಶಾಸಕ ಶರತ್ ಬಚ್ಚೇಗೌಡ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಶರತ್ ಬಚ್ಚೇಗೌಡ ಮಾತನಾಡಿ, ‘ಮನುಷ್ಯನಿಗೆ ದೈಹಿಕ, ಮಾನಸಿಕ ಶಕ್ತಿಯ ಜತೆಗೆ ಆಧ್ಯಾತ್ಮಿಕ ಶಕ್ತಿಯು ಅವಶ್ಯವಾಗಿ ಬೇಕಾಗುತ್ತದೆ. ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರು ನನ್ನ ಗೆಲುವಿಗಾಗಿ ಧರ್ಮಸ್ಥಳ ಮಂಜುನಾಥನಿಗೆ ಹರಕೆ ಕಟ್ಟಿಕೊಂಡು ಈಗ ಈಡೇರಿಸುತ್ತಿದ್ದಾರೆ. ಅವರ ಪ್ರಯಾಣ ಸುಖಕರವಾಗಿರಲಿ’ ಎಂದು ಆಶಿಸಿದರು.
ಯುವಶಕ್ತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಮಂಜುಗೌಡ ಮಾತನಾಡಿ, ನೆಲವಾಗಿಲು ಗ್ರಾಮ ಪಂಚಾಯಿತಿಯ ಅರೆಹಳ್ಳಿ, ದಳಸಗೆರೆ, ಎತ್ತಿನಒಡೆಯನಪುರ ಗ್ರಾಮಗಳ ಶರತ್ ಅಭಿಮಾನಿಗಳು 205 ಮೂಟೆ ಅಕ್ಕಿ ಸೇರಿದಂತೆ ತರಕಾರಿ ಸಂಗ್ರಹಿಸಿದ್ದು ದೇವಾಲಯಕ್ಕೆ ಅರ್ಪಿಸಿ ಹರಕೆ ತೀರಿಸಲು ಹೊರಟಿದ್ದಾರೆ ಎಂದರು.
ಮುಖಂಡ ಬಿ.ವಿ.ರಾಜಶೇಖರ ಗೌಡ, ಎಸ್.ಎಫ್.ಸಿ.ಎಸ್ ಅಧ್ಯಕ್ಷ ನಾಗೇಶ್, ಎಂಪಿಸಿಎಸ್ ಅಧ್ಯಕ್ಷ ಅರೆಹಳ್ಳಿ ರಾಜಣ್ಣ, ಬೈರೇಗೌಡ, ಮಂಜುನಾಥ್, ರಘು, ವಿಶಾಲ್ ಇದ್ದರು.