ಸೂಲಿಬೆಲೆ: ಪ್ರತಿಯೊಬ್ಬ ವಿದ್ಯಾರ್ಥಿಯೂ ವೈಜ್ಞಾನಿಕ ಚಿಂತನೆಯ ಮನೋಭಾವ ಬೆಳಸಿಕೊಂಡು ಸಾಗಿದಾಗ ಹೊಸ ಅವಿಷ್ಕಾರಗಳನ್ನು ಬೆಳಕಿಗೆ ತರಲು ಸಾಧ್ಯವಾಗುತ್ತದೆ ಎಂದು ಆಲಪ್ಪನಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಲೋಕೇಶ್ ಹೇಳಿದರು.
ಹೊಸಕೋಟೆ ತಾಲ್ಲೂಕಿನ ಆಲಪ್ಪನಹಳ್ಳಿ ಕ್ಲಸ್ಟರ್ ಮಟ್ಟದ ‘ಮಕ್ಕಳ ವಿಜ್ಞಾನ ಹಬ್ಬ 2019’ ಅನ್ನುಹಸಿಗಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಬ್ಬವನ್ನು ಶಾಲಾಭಿವೃದ್ಧಿ ಪದಾಧಿಕಾರಿಗಳು ಉದ್ಘಾಟಿಸಿದರು.
ವಿದ್ಯಾರ್ಥಿಗಳು ಕಲಿಕಾ ಸಾಮರ್ಥ್ಯವನ್ನು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಹೊರಹೊಮ್ಮಿಸಲು ಪೂರಕವಾಗಿ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಕ್ಲಸ್ಟರ್ ವ್ಯಾಪ್ತಿಯ 7 ಸರ್ಕಾರಿ ಶಾಲೆಗಳಿಂದ 6, 7 ಮತ್ತು 8 ನೇ ತರಗತಿಯ ಒಟ್ಟು 160 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹಾಗೂ ಸಮನ್ವಯಾಧಿಕಾರಿ ಲಲಿತಮ್ಮ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ರೇಖಾ, ಕರುಣಾ, ಉಮಾದೇವಿ, ಶಿವನಂದಾ, ವೆಂಕಟೇಶ್, ಅನ್ನಪೂರ್ಣ ವಿಜ್ಞಾನ ಹಬ್ಬದ ಉಸ್ತುವಾರಿ ವಹಿಸಿದ್ದರು.