ದೇವನಹಳ್ಳಿ : ಇಲ್ಲಿನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೆ. ಎಚ್. ಮುನಿಯಪ್ಪ ರಾಜ್ಯದ ಮುಖ್ಯಮಂತ್ರಿಯಾಗಲು ಅರ್ಹರು ಎಂದು ಮಾಜಿ ಸಂಸದ ವೀರಪ್ಪ ಮೊಯಿಲಿ ಹೇಳಿದ್ದಾರೆ.
ವಿಜಯಪುರ ಹೋಬಳಿ ಮಂಡಿಬೆಲೆ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರದ ಸಭೆಯಲ್ಲಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಪರವಾಗಿ ಮಾಜಿ ಸಂಸದ ಎಂ.ವೀರಪ್ಪಮೊಯಿಲಿ ಅವರು ಮತಯಾಚನೆ ಮಾಡಿದರು. ನಂತರ ಮಾತನಾಡಿದ ಅವರು ‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮುನಿಯಪ್ಪ ಮುಖ್ಯಮಂತ್ರಿಯಾಗಹುದು ಇಲ್ಲ ಉಪ ಮುಖ್ಯಮಂತ್ರಿಯಾಗಬಹುದು. ಇಂತಹವರು ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ‘ ಎಂದರು.
‘ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಕೊಡುಗೆ ಮತ್ತು ಸಮರ್ಪಣೆ ಜಾಸ್ತಿಯಿದೆ. ದೇಶದಲ್ಲಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಲು ಮತ್ತು ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಲುಕಾಂಗ್ರೆಸ್ ಅವಕಾಶ ಕಲ್ಪಿಸಿದೆ. ಅವರು ಕಾಂಗ್ರೆಸ್ ಸಹಾಯ ಮರೆಯಬಾರದು‘ ಎಂದರು.
‘ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಆರಂಭಕ್ಕೆ ದೇವೇಗೌಡ ಅವರು ವಿರೋಧಿಸಿದ್ದರು. ಬಿಡದಿಯಲ್ಲಿ ಪ್ರಾರಂಭಿಸಬೇಕೆಂದು ಹಟ ಹಿಡಿದಿದ್ದರು. ಕಾಂಗ್ರೆಸ್ ಪಟ್ಟು ಹಿಡಿದು ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಆಗುವಂತೆ ಮಾಡಿತು. ಈ ಮೂಲಕ ಸಾವಿರಾರು ಮಂದಿಗೆ ಉದ್ಯೋಗದ ಅವಕಾಶಗಳು ದೊರೆಯಿತು‘ ಎಂದು ತಿಳಿಸಿದರು.
‘ನಾನು ಹೊತ್ತಿದ್ದ ಕನಸುಗಳಲ್ಲಿ ಶೇ 50 ರಷ್ಟು ಈಡೇರಿಸಿದ್ದೇನೆ. ಉಳಿದ ಕನಸುಗಳನ್ನು ಕೆ.ಎಚ್.ಮುನಿಯಪ್ಪ ಈಡೇರಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತಲಿವೆ. ಪ್ರತಿಯೊಬ್ಬರಿಗೂ ಉದ್ಯೋಗ ಅವಕಾಶ ಸಿಗಲಿವೆ‘ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಲಕ್ಷ್ಮೀನಾರಾಯಣಪ್ಪ ಮಾತನಾಡಿ, ‘ಕ್ಷೇತ್ರದಲ್ಲಿ 10 ವರ್ಷ ಕಾಂಗ್ರೆಸ್ ಶಾಸಕರಿಲ್ಲದೆ ನಾವು ಅನುಭವಿಸಿರುವಂತಹ ನೋವು ಸಾಕಾಗಿದೆ. ಈ ಬಾರಿ ಅನುಭವಿ ರಾಜಕಾರಣಿ ನಮಗೆ ಸಿಕ್ಕಿದ್ದಾರೆ. ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿಕೊಳ್ಳಲು ಪ್ರತಿಯೊಬ್ಬರೂ ಪಣ ತೊಡಬೇಕು‘ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ರಾಜಣ್ಣ ಮಾತನಾಡಿ, ‘ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಮ್ ಆಗಿದೆ. ಆದ್ದರಿಂದ ಎರಡೂ ಪಕ್ಷಗಳಲ್ಲಿ ಯಾವ ಪಕ್ಷಕ್ಕೆ ಮತ ನೀಡಿದರೂ ಒಂದೇ ಆಗುತ್ತದೆ ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ‘ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಪ್ರಸನ್ನಕುಮಾರ್, ಮಾಜಿ ಶಾಸಕ ಮುನಿನರಸಿಂಹಯ್ಯ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮುಖಂಡರಾದ ಜಗನ್ನಾಥ್, ಚಿನ್ನಪ್ಪ, ಎಸ್.ಪಿ.ಮುನಿರಾಜು, ಶಾಂತ್ ಕುಮಾರ್, ಲೋಕೇಶ್, ಸಿ.ಕೆ.ರಾಮಚಂದ್ರಪ್ಪ, ಅನಂತಕುಮಾರಿಚಿನ್ನಪ್ಪ, ಕೆ.ಸಿ.ಮಂಜುನಾಥ್, ಚೈತ್ರಾವೀರೇಗೌಡ, ಪಿಳ್ಳಣ್ಣ, ಚಂದೇನಹಳ್ಳಿ ಮುನಿಯಪ್ಪ, ಎಂ.ನಾರಾಯಣಸ್ವಾಮಿ, ಮಂಡಿಬೆಲೆ ದೇವರಾಜಪ್ಪ, ದಿನ್ನೂರು ವೆಂಕಟೇಶ್, ನಾಗೇಗೌಡ, ಡಿ.ವಿ.ಕೃಷ್ಣಮೂರ್ತಿ, ಧರ್ಮಪುರ ಕೃಷ್ಣಪ್ಪ, ಎಸ್.ಆರ್.ರವಿಕುಮಾರ್, ಶಿವಕುಮಾರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.