ಆನೇಕಲ್: ಗಾಂಧೀಜಿ ರಾಮರಾಜ್ಯದ ಕನಸು ಕಂಡಿದ್ದರು. ಮಹಿಳೆಯರು ಯಾವುದೇ ಭಯ, ಆತಂಕವಿಲ್ಲದೇ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವಂತಹ ವಾತಾವರಣ ನಿರ್ಮಿಸಬೇಕು ಎಂಬುದು ಗಾಂಧೀಜಿ ಆಶಯವಾಗಿತ್ತು ಎಂದು ಕೆಪಿಸಿಸಿ ಕಾರ್ಯದರ್ಶಿ ಸುಷ್ಮಾರೆಡ್ಡಿ ತಿಳಿಸಿದರು.
ಅವರು ತಾಲ್ಲೂಕಿನ ಹುಲಿಮಂಗಲದಲ್ಲಿ ಭಾನುವಾರ ಆಯೋಜಿಸಿದ್ದ ಗಾಂಧಿ ಜಯಂತಿ ಅಂಗವಾಗಿ ಮಹಿಳಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಈ ಮೂಲಕ ಮಹಿಳೆಯರು ನೆಮ್ಮದಿಯಿಂದ ಜೀವಿಸಲು ಪೂರಕ ವಾತಾವರಣವನ್ನು ನಿರ್ಮಿಸುವುದು ಗಾಂಧೀಜಿ ಅವರಿಗೆ ನೀಡಿದ ಗೌರವವಾಗಿದೆ ಎಂದರು.
ಮಹಿಳೆಯರು ಸ್ವಾವಲಂಬಿಗಳಾಗಬೇಕು. ಹಾಗಾಗಿ ಹೊಲಿಗೆ, ಬ್ಯೂಟಿಷಿಯನ್ ಸೇರಿದಂತೆ ವಿವಿಧ ಕೌಶಲಗಳಲ್ಲಿ ತರಬೇತ ಮಾರ್ಗದರ್ಶನ ಪಡೆದು ಸ್ವಉದ್ಯೋಗಗಳನ್ನು ಮಾಡಲು ಸಿದ್ಧರಾಗಬೇಕು. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಿಕಾರೆಡ್ಡಿ, ಮುಖಂಡ ಎಚ್.ಪಿ.ರಾಜಗೋಪಾಲರೆಡ್ಡಿ, ಮುಖಂಡರಾದ ಮುದಾಸೂರ್, ಅಹಮದ್, ಚಿನ್ನಪ್ಪ, ಜೋಸೆಫ್, ಉದಯ್, ಕೃಷ್ಣಮೂರ್ತಿ, ಕುಮಾರ್, ಮುನಿರತ್ನ, ಗೋವಿಂದಮ್ಮ, ಶೋಭಾ, ವೀಣಾಗೌಡ, ರೂಪಾಗೌಡ, ಅಶ್ವಿನಿ, ನಿರ್ಮಲ, ಪ್ರೇಮ, ದಿವ್ಯ, ಆಶಾ ಇದ್ದರು.