ಆನೇಕಲ್: ತಾಲ್ಲೂಕಿನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ಮಹಾ ರಥೋತ್ಸವ ಮಂಗಳವಾರ ಸಡಗರ ಸಂಭ್ರಮಗಳಿಂದ ನೆರವೇರಿತು.
ಬೆಳಗಿನಿಂದಲೂ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು. ಮಧ್ಯಾಹ್ನ 12ರ ವೇಳೆಗೆ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಗ್ರಾಮದ ಬೀದಿಗಳಲ್ಲಿ ರಥವನ್ನು ಎಳೆಯಲಾಯಿತು. ಭಕ್ತರು ದವನ ಚುಚ್ಚಿದ ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ರಥವು ಸಾಗುತ್ತಿದ್ದಂತೆ ವೀರಗಾಸೆ ಹಾಗೂ ನಂದಿಧ್ವಜ ಜಾನಪದ ತಂಡಗಳು ಪ್ರದರ್ಶನ ನೀಡಿ ಉತ್ಸವಕ್ಕೆ ಮೆರುಗು ನೀಡಿದವು.
ರಥೋತ್ಸವದ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗ್ರಾಮದ ಹಲವು ಸ್ಥಳಗಳಲ್ಲಿ ಭಕ್ತರು ಅರವಂಟಿಕೆಗಳನ್ನಿಟ್ಟು ಭಕ್ತರಿಗೆ ನೀರು ಮಜ್ಜಿಗೆ, ಪಾನಕ,ಕೋಸಂಬರಿ ವಿತರಿಸಿದರು.
ದೇವಾಲಯದ ಟ್ರಸ್ಟ್ ವತಿಯಿಂದ ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.
ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್.ಬಸವರಾಜು, ದೇವಾಲಯ ಸಮಿತಿಯ ಅಧ್ಯಕ್ಷ ಕೋವಾ ರೇವಣ್ಣ, ಹೆನ್ನಾಗರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆರ್.ಕೆ.ಕೇಶವ, ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ, ದೇವಾಲಯ ಸಮಿತಿಯ ಎಚ್.ಎಸ್.ನಂಜಪ್ಪ, ವೆಂಕಟಸ್ವಾಮಿ, ಕಿರಣ್ ಪ್ರಕಾಶ್, ವೇದಮೂರ್ತಿ, ರುದ್ರಾರಾಧ್ಯ, ಭದ್ರೇಗೌಡ ಮತ್ತಿತರರು ಹಾಜರಿದ್ದರು.