ಬೆಳಗಾವಿ: ‘ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಎಲ್ಲ 58 ವಾರ್ಡ್ಗಳಲ್ಲೂ ಆಮ್ ಆದ್ಮಿ ಪಕ್ಷ (ಎಎಪಿ)ದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಪಕ್ಷದ ಬೆಳಗಾವಿ ಉಸ್ತುವಾರಿ ಲಕ್ಷ್ಮಿಕಾಂತರಾವ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಸಕ್ರಿಯ ಕಾರ್ಯಕರ್ತರು ಚಿಹ್ನೆಯ ಮೇಲೆ ಸ್ಪರ್ಧಿಸುವರು. ಆಟೊರಿಕ್ಷಾ ಚಾಲಕರು ಮತ್ತು ಕೈಗಾರಿಕಾ ಕ್ಷೇತ್ರದ ತಲಾ ಇಬ್ಬರಿಗೆ ಟಿಕೆಟ್ ಕೊಡಲಾಗುವುದು. ಸಾಮಾನ್ಯರಿಗೂ ಜನಪ್ರತಿನಿಧಿ ಆಗುವ ಅವಕಾಶ ದೊರೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದು ಹೇಳಿದರು.
‘ಆಟೊರಿಕ್ಷಾ ಚಾಲಕರು ಮತ್ತು ಕೈಗಾರಿಕೆಗಳ ಸಮಸ್ಯೆಗಳ ಬಗ್ಗೆ ಪಾಲಿಕೆಯಲ್ಲಿ ದನಿ ಎತ್ತಬೇಕು ಎಂಬ ಉದ್ದೇಶದಿಂದ ಆ ವರ್ಗದ ಪ್ರತಿನಿಧಿಗಳಿಗೆ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ. ಈಗಾಗಲೇ 28 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ಧಪಡಿಸಿ ಘೋಷಿಸಲಾಗುವುದು. ವ್ಯವಸ್ಥಿತವಾಗಿ ಚುನಾವಣೆ ಎದುರಿಸಲಾಗುವುದು. ನಗರದಲ್ಲಿರುವ ಸಮಸ್ಯೆಗಳು ಹಾಗೂ ಆಗಬೇಕಿರುವ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ’ ಎಂದು ತಿಳಿಸಿದರು.
ಪಕ್ಷದ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ಬಿ. ನಾಗಣ್ಣ, ಕಾನೂನು ಸಲಹಾ ವಿಭಾಗದ ಪ್ರಮುಖ ವಿಜಯ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಪಾಟೀಲ ಕಪಾಡಿಯಾ, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಅಬ್ದುಲ್ ತವಾಬ್ ಶೇಖ್, ಮಾಧ್ಯಮ ಸಂಯೋಜಕ ಅನಿಲ ಸೌದಾಗರ ಇದ್ದರು.