ಬೆಳಗಾವಿ: ‘ಪ್ರಸ್ತುತ ಸನ್ನಿವೇಶದಲ್ಲಿ ಪ್ರೀತಿ, ವಾತ್ಸಲ್ಯ ಹಾಗೂ ಗೌರವ ಸಿಗುವುದು ಓದುವುದರಿಂದ ಮಾತ್ರವೇ ಹೊರತು, ಮೊಬೈಲ್ ಗೀಳಿನಿಂದಲ್ಲ’ ಎಂದು ಸಾಂಬ್ರಾ ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ ಹೇಳಿದರು.
ಇಲ್ಲಿನ ಹಿಂದವಾಡಿಯ ಪ್ರೇರಣಾ ಪದವಿಪೂರ್ವ ಕಾಲೇಜಿನಲ್ಲಿ ‘ಅಭ್ಯುದಯ 2020’ ವಾರ್ಷಿಕೋತ್ಸವದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.
‘ಪಾಲಕರನ್ನು ಮಕ್ಕಳು ಅನುಸರಿಸುತ್ತಾರೆ. ನಮ್ಮ ನಡೆ–ನುಡಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಜೀವನಶೈಲಿ ರೂಢಿಸಿಕೊಳ್ಳುತ್ತಾರೆ. ಹೀಗಾಗಿ, ನಾವು ಅವರಿಗೆ ಆದರ್ಶವಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ವಿಜ್ಞಾನ ವಿಭಾಗದ ಪ್ರೇರಣಾ ಭಟ್ಟ, ಭಾಗ್ಯಶ್ರೀ ರಾಸಳ, ತುಷಾರ ಜಾಧವ, ವಿನಾಯಕ ಮಡಿವಾಳರ, ವಾಣಿಜ್ಯ ವಿಭಾಗದ ಬಾಲರಾಜ ಕಂದುಲಾ, ಅಭಿನವ ಸಂಗಾತಿ, ರಮಣಿ ದೇಶಪಾಂಡೆ, ವೈಷ್ಣವಿ ಅನಗೋಳಕರ ವರ್ಷದ ಅತ್ಯುತ್ತಮ ವಿದ್ಯಾರ್ಥಿ, ವಿದ್ಯಾರ್ಥಿನಿಯರೆಂದು ಪ್ರಶಸ್ತಿ ಗಳಿಸಿದರು.
ಸಂಪನ್ಮೂಲ ವ್ಯಕ್ತಿ ಸಾಧನಾ ಪೋಟೆ, ಸಂಸ್ಥೆಯ ಮುಖ್ಯಸ್ಥ ಗಿರೀಶ ದಂಡೆನ್ನವರ, ಅಮಿತ ವಾಗರಾಳಿ, ಪ್ರಾಂಶುಪಾಲ ವೇಣುಗೋಪಾಲ ಇದ್ದರು.
ದಿವ್ಯಾ ತಳವಾರ ಹಾಗೂ ಯುಕ್ತಾ ಅರಬಳ್ಳಿ ನಿರೂಪಿಸಿದರು. ಶ್ರೀಲಕ್ಷ್ಮಿ ವಂದಿಸಿದರು.