ಅಥಣಿ: ‘ಸಮುದಾಯದ ಹಿನ್ನಡೆ ಸಮುದಾಯದವರಿಂದಲೇ ಆಗುತ್ತಿದೆ. ಇದನ್ನು ಬಿಟ್ಟು ನಾವೆಲ್ಲರೂ ಒಗ್ಗಟ್ಟಾಗಬೇಕು. ಸಮಾಜದ ಏಳಿಗೆಗಾಗಿ ಹೋರಾಡಬೇಕು’ ಎಂದು ಅಖಿಲ ಕರ್ನಾಟಕ ಅಂಬಿಗರ ಚೌಡಯ್ಯ ಮಹಾಸಭಾ ಅಧ್ಯಕ್ಷೆ ಅಂಬಿಕಾ ಜಾಲಗಾರ ಹೇಳಿದರು.
ಇಲ್ಲಿನ ಶಿವಣಗಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ ₹ 32 ಕೋಟಿ ಹಾಗೂ ಈಗ ಬಿ.ಎಸ್. ಯಡಿಯೂರಪ್ಪ ಅವರು ₹ 5 ಕೋಟಿ ಅನುದಾನವನ್ನು ಸಮಾಜದ ಅಭಿವೃದ್ಧಿಗಾಗಿ ಘೋಷಣೆ ಮಾಡಿದ್ದಾರೆ. ಅದನ್ನು ಉಪಯೋಗಿಸಿಕೊಳ್ಳುವಲ್ಲಿ ಸಮುದಾಯದ ನಾಯಕರು ವಿಫಲವಾಗಿದ್ದಾರೆ. ಮುಖ್ಯವಾಹಿನಿಗೆ ಬರಲು ಸಿಗಬೇಕಾದ ಸೌಲಭ್ಯಗಳು ದೊರೆಯದಂಂತಾಗಿದೆ’ ಎಂದು ದೂರಿದರು.
ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಜಮಖಂಡಿಕರ, ‘ನಮ್ಮ ಸಮುದಾಯದ ಜನರನ್ನು ನಮ್ಮ ನಾಯಕರೇ ಮೋಸ ಮಾಡುತ್ತಿದ್ದಾರೆ. ಅದು ಅಥಣಿಯಲ್ಲಿಯೂ ಆಗುತ್ತಿದೆ. ನಾವೆಲ್ಲರೂ ಸೇರಿ ಶರಣರ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಆದರೆ, ಕೆಲವರು ಈ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಸಮುದಾಯದವರಿಗೆ ಕರೆ ಮಾಡಿ ಹೇಳಿದ್ದಾರೆ’ ಎಂದು ಆರೋಪಿಸಿದರು.
ಇದಕ್ಕೂ ಮುನ್ನ, ಅಂಬಿಗರ ಚೌಡಯ್ಯ ವೃತ್ತದಿಂದ ಚೌಡಯ್ಯ ಭಾವಚಿತ್ರದ ಮೆರವಣಿಗೆ ನಡೆಯಿತು.
ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜ, ಉಪ ತಹಶೀಲ್ದಾರ್ ರಾಜು ಡವಳೇಶ್ವರ, ಮುಖಂಡರಾದ ಅಣ್ಣಪ್ಪ ತಳವಾರ, ಜಯಶ್ರೀ ಪೂಜಾರಿ, ಲಕ್ಷ್ಮಿ ನಾಟೇಕರ, ಅಡಿವೆಪ್ಪ ಕೋಳಿ, ಮೋಹನ ಸಲಗರ್, ವಿಜಯ ಕಾಯಪಲ್ಲೆ, ರವಿ ಪೂಜಾರಿ, ಮಲ್ಲು ಗಸ್ತಿ, ರಾಯಪ್ಪ ತಳವಾರ, ಇಂದುಮತಿ ಉತ್ತೂರ ಇದ್ದರು.