ಬೆಳಗಾವಿ: ‘ಸ್ಪರ್ಧೆ ಎಂದ ಮೇಲೆ ಸೋಲು- ಗೆಲವು ಇದ್ದದ್ದೆ. ಸೋಲನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಮತ್ತೆ ಗೆಲ್ಲಲು ಸಾಧ್ಯವಾಗುತ್ತದೆ’ ಎಂದು ಸಾಹಿತಿ ಸರಜೂ ಕಾಟ್ಕರ್ ಹೇಳಿದರು.
ನಗರದ ತಿಳಕವಾಡಿಯ ಕೆ.ಬಿ. ಕುಲಕರ್ಣಿ ಕಲಾ ಗ್ಯಾಲರಿಯಲ್ಲಿ ವರ್ಣಕಲಾ ಸಾಂಸ್ಕೃತಿಕ ಸಂಘ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕಲಾ ಪ್ರದರ್ಶನ ಹಾಗೂ ಶಿಬಿರ ಮತ್ತು ವರ್ಣಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ‘ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ’ ಎಂದರು.
ಉದ್ಘಾಟಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ ಡಿ. ಮಾತನಾಡಿದರು.
ಬೆಂಗಳೂರಿನ ರಮೇಶ ತೇರದಾಳ, ಬೆಳಗಾವಿಯ ಬಾಳು ಸದಲಗೆ, ಚಿಕ್ಕಮಂಗಳೂರಿನ ಲಕ್ಷ್ಮಿ ಮೈಸೂರೆ, ಮೈಸೂರಿನ ಬಿಂದುರಾಯ್ ಬಿರಾದಾರ, ಹುಬ್ಬಳ್ಳಿಯ ಶೇಖರ ಬಳ್ಳಾರಿ ಅವರಿಗೆ ‘ವರ್ಣಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಮಾ ಕಲಾ ಸಂಸ್ಥೆಯ ಪ್ರಾಚಾರ್ಯೆ ಶಶಿಕಲಾ ಕಮ್ಮಾರ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ನಾಗೇಶ ಸಿ. ಚಿಮರಗೋಳ, ಕಾರ್ಯದರ್ಶಿ ಸಂತೋಷ ಎಸ್. ಮಲ್ಲೋಳಿ, ಭಾಸ್ಕರ ಪಾಟೀಲ, ದ್ಯಾಮಪ್ಪ ಕಾಕಂಬಳಿ, ಸುಶೀಲಾ ತರಬರ, ದೀಪಾ ಉಪಸ್ಥಿತರಿದ್ದರು.