ಬೆಳಗಾವಿ: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಖಾನಾಪುರ ತಾಲ್ಲೂಕಿನ ಅಸೋಗಾ ಬಳಿಯ ಅಲಾತ್ರಿ ಹಳ್ಳದಲ್ಲಿ ಶವವಾಗಿ ಸೋಮವಾರ ಪತ್ತೆಯಾಗಿದ್ದಾರೆ.
ಖಾನಾಪುರದವರೇ ಆದ ಉಮರ್ ಖಲೀಫ (16) ಹಾಗೂ ಅರ್ಫಾತ್ ಅರಕಾಟಿ (16) ಮೃತರು.
ಅವರು ಗುರುವಾರ ಮಧ್ಯಾಹ್ನ ಮನೆಯಿಂದ ಹೋಗಿದ್ದರು. ಸಂಜೆಯಾದರೂ ಬಂದಿರಲಿಲ್ಲ. ಮನೆಯವರು ಹುಡುಕಾಟ ನಡೆಸಿದ್ದರಾದರೂ. ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಶನಿವಾರ ಸಂಜೆ ಅವರ ಬಟ್ಟೆ ಮತ್ತು ಮೊಬೈಲ್ ಅಲಾತ್ರಿ ಹಳ್ಳದ ದಡದಲ್ಲಿ ದೊರೆತ್ತಿತ್ತು. ಇದನ್ನು ಆಧರಿಸಿ ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಸೋಮವಾರ ಬೆಳಿಗ್ಗೆ ಮೃತದೇಹಗಳು ಪತ್ತೆಯಾಗಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಈಜಲು ಹೋಗಿದ್ದರು ಎಂದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.