ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು ಕರ್ನಾಟಕದಲ್ಲಿ ಬೆಳಗಾವಿ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ: ಬೊಮ್ಮಾಯಿ

–ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌ ಷೋರೂಂ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
Last Updated 26 ಜೂನ್ 2022, 11:34 IST
ಅಕ್ಷರ ಗಾತ್ರ

ಬೆಳಗಾವಿ: ‘ಕಿತ್ತೂರು ಕರ್ನಾಟಕದಲ್ಲಿ ಬೆಳಗಾವಿ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ. ಈ ಬಾರಿ ಬಜೆಟ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್ ಘೋಷಿಸಲಾಗಿದ್ದು, ನಗರಕ್ಕೆ ರೈಲ್ವೆ ಸಂಪರ್ಕ ವ್ಯವಸ್ಥೆ ಸುಧಾರಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಟಿಳಕವಾಡಿಯ ಮಿಲೇನಿಯಂ ಗಾರ್ಡನ್ ಹತ್ತಿರ ತೆರೆದ ‘ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌’ ಬೃಹತ್‌ ಜವಳಿ ಷೋರೂಂ ಅನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ನೆರೆಯ ಮಹಾರಾಷ್ಟ್ರ ಹಾಗೂ ಗೋವಾದೊಂದಿಗೆ ಬೆಳಗಾವಿ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾದ ಅವಕಾಶಗಳಿವೆ. ಹೀಗಾಗಿ ಕೈಗಾರಿಕಾ ಟೌನ್‌ಶಿಪ್ ಘೋಷಿಸಿದ್ದೇವೆ. ಬೆಳಗಾವಿ–ಚನ್ನಮ್ಮ ಕಿತ್ತೂರು–ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಇರುವ ಭೂಸ್ವಾಧೀನ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು’ ಎಂದರು.

‘ಒಂದೇ ಸೂರಿನಡಿ ಇಡೀ ಕುಟುಂಬಕ್ಕೆ ಬೇಕಾದ ಬಟ್ಟೆಗಳು ಸಿಗುವುದು ವಿರಳ. ಬೆಳಗಾವಿಯಲ್ಲಿ ತಲೆ ಎತ್ತುತ್ತಿರುವ ಹೊಸ ಷೋರೂಂ ಆ ಕೊರತೆ ನೀಗಿಸಲಿದೆ. ಉತ್ತಮ ದರದಲ್ಲಿ ಉತ್ಕೃಷ್ಟ ದರ್ಜೆ ಬಟ್ಟೆಗಳು ಇಲ್ಲಿ ಸಿಗಲಿವೆ. ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಇದರ ಶಾಖೆಗಳು ಇನ್ನಷ್ಟು ಹೆಚ್ಚಲಿ’ ಎಂದು ಆಶಿಸಿದರು.

‘ಇಂದು ಹಲವು ಜವಳಿ ಸಂಸ್ಥೆಗಳು ಬ್ರ್ಯಾಂಡ್‌ ನೇಮ್‌ಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿವೆ. ಆದರೆ, ಚನ್ನಬಸಪ್ಪ ಆ್ಯಂಡ್ ಸನ್ಸ್‌ ಉತ್ತಮ ಸೇವೆ, ಪರಿಶ್ರಮದಿಂದ ನೈಜವಾಗಿ ಬ್ರ್ಯಾಂಡ್‌ ನೇಮ್‌ ಆಗಿ ಬೆಳೆದಿದೆ. 8 ದಶಕಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ’ ಎಂದು ಶ್ಲಾಘಿಸಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿದರು. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಅರಣ್ಯ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ಲಕ್ಷ್ಮಿ ಹೆಬ್ಬಾಳಕರ, ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಚೇರ್ಮನ್‌ ವಿಜಯ ಸಂಕೇಶ್ವರ ಉಪಸ್ಥಿತರಿದ್ದರು. ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌ ನಿರ್ದೇಶಕ ಬಿ.ಸಿ.ಶಿವಕುಮಾರ್‌ ಸ್ವಾಗತಿಸಿದರು. ನಿರ್ದೇಶಕ ಬಿ.ಸಿ.ಚಂದ್ರಶೇಖರ ಅತಿಥಿ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT