ಬೆಳಗಾವಿ: ಜಿಲ್ಲೆಯ ಸಂಕೇಶ್ವರದ ಎಸ್.ಡಿ. ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದ ಬಸ್ಸಿನ ‘ಬ್ರೇಕ್ಫೇಲ್’ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ.
ಮಹಾರಾಷ್ಟ್ರದ ಮಹಾಬಲೇಶ್ವರಕ್ಕೆ 50 ವಿದ್ಯಾರ್ಥಿಗಳು ಶಿಕ್ಷಕರ ಜತೆಗೆ ಬುಧವಾರ ನಸುಕಿನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಸಾರಿಗೆ ಸಂಸ್ಥೆಯ ಸಂಕೇಶ್ವರ ಘಟಕಕ್ಕೆ ಸೇರಿದ ಬಸ್ಸಿನ ಬ್ರೇಕ್ ಮಹಾಬಲೇಶ್ವರ ಘಟ್ ರಸ್ತೆಯಲ್ಲೇ ವಿಫಲವಾಯಿತು.
ಎಡಭಾಗಕ್ಕೆ ಕಡಿದಾದ ಕಂದಕ ಬಲಭಾಗಕ್ಕೆ ಗುಡ್ಡವಿರುವ ಈ ರಸ್ತೆಯಲ್ಲಿ ಚಾಲಕ ವಿಚಲಿತಗೊಳ್ಳದೇ, ಬಸ್ಸನ್ನು ಗುಡ್ಡದ ಮಣ್ಣಿನ ಭಾಗಕ್ಕೆ ಗುದ್ದಿಸಿದರು. ತಕ್ಷಣ ಬಸ್ ಎಂಜಿನ್ ಬಂದ್ ಆಯಿತು.
ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇತರ ವಾಹನಗಳ ಸವಾರರು ವಿದ್ಯಾರ್ಥಿಗಳ ನೆರವಿಗೆ ಧಾವಿಸಿದರು. ಎಲ್ಲರನ್ನೂ ಬಸ್ಸಿನಿಂದ ಇಳಿಸಿ, ನೀರು ಕೊಟ್ಟು ಸಂತೈಸಿದರು.
ಕೆಲವು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರವಾಸದಲ್ಲಿದ್ದವರು ಮಾಹಿತಿ ನೀಡಿದ್ದಾರೆ.