ಬೆಳಗಾವಿ: ತಾಲ್ಲೂಕಿನ ಖಾಸಗಿ ಹೋಟೆಲ್ನಲ್ಲಿ ಎಜುಕೇಷನ್ ಇಂಡಿಯಾ ಸಂಸ್ಥೆಯಿಂದ ಈಚೆಗೆ ಪ್ರೌಢಶಾಲೆಗಳ ಪ್ರಾಚಾರ್ಯರ ವಿದ್ವತ್ ಸಭೆ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿದ್ದ ಕರ್ನಲ್ ಪದ್ಮಿನಿ ಶ್ರೀನಿವಾಸ ಮಾತನಾಡಿ, ‘ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಕೋವಿಡ್ ನಂತರದ ಶಿಕ್ಷಣದ ಸ್ಥಿತಿಗತಿ ಇವೆರಡೂ ಪ್ರಸ್ತುತ ಪರಿಸ್ಥಿತಿಯಲ್ಲಿ ಮಹತ್ವ ಪಡೆದಿವೆ. 1986ರಲ್ಲಿ ಅಂಗೀಕರಿಸಿದ ಶಿಕ್ಷಣ ನೀತಿಯನ್ನೇ ಇದುವರೆಗೂ ಮುಂದುವರಿಸಲಾಗಿತ್ತು. ಈಗ ಜಗತ್ತು ಬದಲಾವಣೆಗೆ ತೆರೆದುಕೊಂಡಂತೆ ಶಿಕ್ಷಣದಲ್ಲೂ ಸಮಗ್ರ ಬದಲಾವಣೆ ಆಗಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಆ ನೀತಿಯು ಹಲವು ಭರವಸೆಗಳನ್ನು ಹುಟ್ಟುಹಾಕಿದೆ. ಅದರ ಪರಿಣಾಮಕಾರಿ ಅನುಷ್ಠಾನ ಶಿಕ್ಷಕರ ಮೇಲಿದೆ’ ಎಂದರು.
‘ಕೋವಿಡ್ ನಂತರ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾಗಿದೆ. ತಂತ್ರಜ್ಞಾನ ಆಧರಿತ ಪಾಠಗಳಿಗೆ ಶಿಕ್ಷಕರು, ವಿದ್ಯಾರ್ಥಿಗಳು ಒಗ್ಗಿದ್ದಾರೆ. ಸವಾಲುಗಳೂ ಇವೆ. ಬದಲಾವಣೆಗಳನ್ನು ಸ್ವೀಕರಿಸಿ ಶಿಕ್ಷಣ ಕ್ಷೇತ್ರ ಹೊಸತನಕ್ಕೆ ತೆರೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಿದೆ. ಬದಲಾಗುತ್ತಿರುವ ಕಾಲಘಟ್ಟದೊಂದಿಗೆ ಸಂಚರಿಸಿ ಅಭಿವೃದ್ಧಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಕೋವಿಡ್–19 ನಂತರದ ಶಿಕ್ಷಣದ ಸ್ಥಿತಿಗತಿ ಬಗ್ಗೆ ಪ್ರಾಚಾರ್ಯರಿಗೆ ಮಾಹಿತಿ ನೀಡಲಾಯಿತು. ವಿವಿಧ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಯಿತು. ಖಾಸಗಿ ಪ್ರೌಢಶಾಲೆಗಳ 200 ಪ್ರಾಚಾರ್ಯರು, ಎಜುಕೇಷನ್ ಇಂಡಿಯಾ ಸಂಸ್ಥೆಯವರು ಪಾಲ್ಗೊಂಡಿದ್ದರು.
ಪ್ರೊ. ಬಸವರಾಜ ಕೊಣ್ಣೂರ, ವಿನೋದ ದೊಡ್ಡಣ್ಣವರ, ಎಜುಕೇಷನ್ ಇಂಡಿಯಾ ಸಂಸ್ಥೆಯ ಸಿಇಒ ಡಾ.ಮನ್ಜೀತ್ ಜೈನ್, ಸಂತೋಷ ಖಟವಟೆ, ನಿಶಾಂತ ಶರ್ಮಾ, ಸೌರಭ್ ಭಾಗವಹಿಸಿದ್ದರು.