ಮೂಡಲಗಿ: ತನ್ನ ಯಜಮಾನನ ಸಾವಿನ ನೋವಿನಲ್ಲಿ ಅನ್ನ–ನೀರು ಬಿಟ್ಟಿದ್ದ ಶ್ವಾನ ಸೋಮವಾರ ಕೊನೆಯುಸಿರೆಳೆದ ಮನಕಲಕುವ ಘಟನೆ ತಾಲ್ಲೂಕಿನ ಅವರಾದಿಯಲ್ಲಿ ನಡೆದಿದೆ.
ಹಾಲು ಮಾರುವ ಶಂಕರೆಪ್ಪ ಮಡಿವಾಳರ (47) ಸೆ. 6ರಂದು (ಸೋಮವಾರ) ಹೃದಯಘಾತದಿಂದ ನಿಧನರಾದರು. ಮನೆಯವರೊಂದಿಗೆ, ಅವರು ಪ್ರೀತಿಯಿಂದ ಸಾಕಿದ್ದ ನಾಯಿಯೂ ದುಃಖಿಸುತ್ತಿತ್ತು. ಸಮಾಧಿ ಬಳಿಗೆ ಹೋಗಿ ಕಣ್ಣೀರಿಡುತ್ತಿತ್ತು. ಶ್ವಾನದ ಪ್ರೀತಿ ಕಂಡು ಜನರೂ ಮರುಗಿದರು.
ಶಂಕರೆಪ್ಪನ ಮನೆಯವರು ಮತ್ತು ಗ್ರಾಮದ ಜನರು ನಾಯಿಗೆ ಆಹಾರ ತಿನ್ನಿಸಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ತನ್ನ ಯಜಮಾನ ಗ್ರಾಮದಿಂದ 6 ಕಿ.ಮೀ. ದೂರದಲ್ಲಿರುವ ಮಹಾಲಿಂಗಪೂರದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶ್ವಾನವೂ ಮಹಾಲಿಂಗಪೂರಕ್ಕೆ ಓಡಿ ಹೋಗಿ ಆಸ್ಪತ್ರೆಯ ರಸ್ತೆಯಲ್ಲಿ ಪ್ರಾಣ ಬಿಟ್ಟಿದೆ. ಗ್ರಾಮದ ವ್ಯಕ್ತಿಯೊಬ್ಬರು ಅದನ್ನು ಗುರುತಿಸಿ ಗ್ರಾಮಕ್ಕೆ ತಂದಿದ್ದರು.
ಹೂಮಾಲೆ ಹಾಕಿ ಸಿಂಗರಿಸಿದ ಬಂಡಿಯಲ್ಲಿ ಊರೆಲ್ಲ ಮೆರವಣಿಗೆ ಮಾಡಿ, ಶಂಕರೆಪ್ಪನ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.