ಐಗಳಿ (ಬೆಳಗಾವಿ ಜಿಲ್ಲೆ): ‘ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಗ್ರಾಮ ಪಂಚಾಯ್ತಿ ಸದಸ್ಯರು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿ, ಮತ್ತೊಮ್ಮೆ ಆಯ್ಕೆಯಾಗುವಂತೆ ನಡೆದುಕೊಳ್ಳಬೇಕು’ ಎಂದು ನೆಲೋಗಿಯ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ಸಿಂಧೂರ ವಸತಿಯ ಅಪ್ಪಯ್ಯ ಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜನಪ್ರತಿನಿಧಿಗಳು ಮೂಲ ಸೌಲಭ್ಯ, ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ಕೊಡಬೇಕು’ ಎಂದರು.
ಗ್ರಾ.ಪಂ. ಅಧ್ಯಕ್ಷೆ ರಾಜಶ್ರೀ ಶಂ.ಪಾಟೀಲ ಮಾತನಾಡಿ, ‘ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.
ಕಕಮರಿ ಮಠದ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ನಿಂಗನಗೌಡ ಪಾಟೀಲ, ಗಿರೀಶ ಬಸರಗಿ, ಶಿದರಾಯ ಬಿರಾದಾರ, ಟ್ರಸ್ಟ್ ಸಮಿತಿ ಅಧ್ಯಕ್ಷ ನರಸಪ್ಪ ಸಿಂಧೂರ, ರಮೇಶಗೌಡ ಪಾಟೀಲ, ಚಂದ್ರಕ್ಕ ಹಾಲಳ್ಳಿ, ಶಕುಂತಲಾ ಬಿರಾದಾರ, ಅನುಸೂಯಾ ಪಾಟೀಲ ಇದ್ದರು.