ಚಿಕ್ಕೋಡಿ: ‘ರಾಜ್ಯದಲ್ಲಿ ಭೀಕರ ಬರ ಇರುವ ಕಾರಣ ರೈತರಿಗೆ ಸೂಕ್ತ ಪರಿಹಾರ, ಕಬ್ಬಿಗೆ ಉತ್ತಮ ಬೆಲೆ, ರೈತರ ಸಾಲವನ್ನು ಸಂಪೂರ್ಣ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ. 7 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಭೀಕರ ಬರ ಇರುವ ಕಾರಣ ರೈತರಿಗೆ ಪ್ರತಿ ಎಕರೆಗೆ ₹ 30 ಸಾವಿರ ಪರಿಹಾರ, ಪ್ರತಿ ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳು ₹ 3,500, ಸರ್ಕಾರದಿಂದ ₹ 2 ಸಾವಿರ ಸೇರಿ ಒಟ್ಟು ₹ 5500 ನೀಡುವುದು, ಜಾನುವಾರು ಮೃತಪಟ್ಟರೆ ₹ 50 ಸಾವಿರ ಪರಿಹಾರ ನೀಡಬೇಕು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು’ ಎಂದು ಹೇಳಿದರು.
ರಾಜ್ಯ ಕಾರ್ಯಾಧ್ಯಕ್ಷ ರಾಜು ಪವಾರ, ಚಿಕ್ಕೋಡಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಶ್ಚಾಪೂರೆ, ರಾಜೇಂದ್ರ ಪಾಶ್ಚಾಪೂರೆ, ಆನಂದ ಪಾಶ್ಚಾಪೂರೆ, ಗಜಾನನ ಕೊಟ್ಟೆಪ್ಪಗೋಳ, ಬಸವಣ್ಣಿ ಡಬ್ಬ, ಮಲ್ಲಪ್ಪ ಅಂಗಡಿ, ವಿವೇಕಾನಂದ ಘಂಟಿ ಇದ್ದರು.