ಬೆಳಗಾವಿ: ತಾಲ್ಲೂಕಿನಲ್ಲಿ ಶನಿವಾರ ತಡರಾತ್ರಿ ನಡೆದ ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತರಾದರು.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬರ್ಡೇ ಹೋಟೆಲ್ ಸಮೀಪ ಶನಿವಾರ ತಡರಾತ್ರಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟರು.
ತಾಲ್ಲೂಕಿನ ಕೇದನೂರ ಗ್ರಾಮದ ಸಂಜು ರಾಜಾಯಿ (29), ಪ್ರಕಾಶ ಚಂಡಕೆ (27) ಅಡಿವೆಪ್ಪ ಗುಜ್ಜನವರ (29) ಮೃತರು. ಅವರು ಖಾನಾಪುರ ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಹೋಗಿ ವಾಪಸಾಗುತ್ತಿದ್ದರು.
ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಊಟಕ್ಕೆ ಹೋಗುವಾಗ ಅಪಘಾತ
ದ್ವಿಚಕ್ರವಾಹನದಲ್ಲಿ ಹೊನಗಾದ ದಾಭಾಗೆ ಶನಿವಾರ ತಡರಾತ್ರಿ ಊಟಕ್ಕೆಂದು ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿಒಬ್ಬ ವಿದ್ಯಾರ್ಥಿ ಮೃತಪಟ್ಟು, ಇನ್ನೊಬ್ಬರು ಗಾಯಗೊಂಡಿದ್ದಾರೆ.
ಗೋಕಾಕ ತಾಲ್ಲೂಕಿನ ಘಟಪ್ರಭಾ ಬಳಿಯ ಧೂಪದಾಳದ ಅಕ್ಷಯ ಹುಂಡೇಕರ (23) ಮೃತ. ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಸಮೀಪದ ಕೇಸ್ತಿ ನಿವಾಸಿ ಸಚಿನ ಕುಲಕರ್ಣಿ (23) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರೂ ಖಾಸಗಿ ಕಾಲೇಜಿನಲ್ಲಿ ಎಂಬಿಒ ವಿದ್ಯಾರ್ಥಿಗಳು. ಕಾಕತಿ ಠಾಣೆ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣ ದಾಖಲಾಗಿದೆ.