ಬೆಳಗಾವಿ: ಸಿಐಡಿ ಬೆಳಗಾವಿ ಘಟಕದ ಪೊಲೀಸರು ರಾಯಬಾಗ ತಾಲ್ಲೂಕಿನ ಕಂಚಕರವಾಡಿ ಗ್ರಾಮದಲ್ಲಿ ದಾಳಿ ನಡೆಸಿ, ಗಾಂಜಾ ಸಸಿಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
‘ಅದೇ ಗ್ರಾಮದ ಸಿದ್ರಾಮ ಮಾರುತಿ ತೋಳೆ ಆರೋಪಿ. ಅವರು ತಮ್ಮ ಹೊಲದ ಮನೆಯ ಮುಂದೆ ಗಾಂಜಾ ಮಾರಾಟ ಮಾಡುತ್ತಿದ್ದಾಗ ಬಂಧಿಸಲಾಗಿದೆ. ಅವರಿಂದ ಅಂದಾಜು ₹ 1.46 ಲಕ್ಷ ಮೌಲ್ಯದ 9 ಕೆ.ಜಿ. 750 ಗ್ರಾಂ. ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ ಲಕ್ಷ್ಮಣ ಹುಂಡರದ ನೇತೃತ್ವದಲ್ಲಿ ಸಿಬ್ಬಂದಿ ಜಗದೀಶ ಎಂ. ಬಾಗನವರ, ಜಿ.ಆರ್. ಶಿರಸಂಗಿ, ಚಿದಂಬರ ಚಟ್ಟರಕಿ, ಜಾವೀದ ನಗಾರಿ ಮತ್ತು ರಾಯಬಾಗ ಠಾಣೆ ಸಿಬ್ಬಂದಿ ಬಾಳೇಶ ಶೆಟ್ಟೆಪ್ಪನವರ, ಎಸ್.ಎಸ್. ಚೌದ್ರಿ ದಾಳಿ ನಡೆಸಿದ್ದಾರೆ.