ಬೆಳಗಾವಿ: ‘ಹೋಮಿಯೋಪತಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿವೆ. ವೈದ್ಯರು ಇದನ್ನು ಬಳಸಿಕೊಂಡು ಈ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಲಹೆ ನೀಡಿದರು.
ಇಲ್ಲಿ ಭಾನುವಾರ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಹೋಮಿಯೋಪತಿ ವೈದ್ಯಕೀಯ ಸಂಘದ ಬೆಳಗಾವಿ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜಗತ್ತಿನಲ್ಲಿ ಉತ್ತಮ ವೈದ್ಯರು ಸಿಗುವುದು ಭಾರತದಲ್ಲಿ ಮಾತ್ರ. ದುಬೈ ಅರಸರು ಕೂಡ ಚಿಕಿತ್ಸೆಗಾಗಿ ನಮ್ಮ ದೇಶಕ್ಕೆ ಬರುತ್ತಾರೆ. ಇದು ಹೆಮ್ಮೆಯ ಸಂಗತಿ’ ಎಂದರು.
‘ವೈದ್ಯರು ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸದೇ ಶ್ರದ್ಧೆಯಿಂದ ರೋಗಿಗಳ ಸೇವೆ ಮಾಡಬೇಕು. ವೃತ್ತಿಕೌಶಲ ಹೆಚ್ಚಿಸಿಕೊಳ್ಳಬೇಕು. ಸ್ವತಂತ್ರವಾಗಿ ಬೆಳೆಯಬೇಕು. ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗಳತ್ತಲೂ ಗಮನಹರಿಸಬೇಕು. ಅವುಗಳು ಶ್ರೀಸಾಮಾನ್ಯರ ಕೈಗೆಟುಕುವ ದರದಲ್ಲಿ ಸಿಗುವಂತೆ ನೋಡಿಕೊಳ್ಳಬೇಕು. ಆಗ ದೇಶಕ್ಕೂ ಅನುಕೂವಾಗುತ್ತದೆ’ ಎಂದು ತಿಳಿಸಿದರು.
ಶಾಖೆಯನ್ನು ಉದ್ಘಾಟಿಸಿದ ಉದ್ಯಮಿ ವಿಜಯ ಸಂಕೇಶ್ವರ, ‘ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಒಂದೇ ಭಾಷೆ, ಒಂದೇ ಬಗೆಯ ವೈದ್ಯಕೀಯ ಸೇವೆಗಳು ನೋಡಲು ಸಿಗುತ್ತವೆ. ಆದರೆ ಭಾರತದಲ್ಲಿ ಮಾತ್ರ ಭಾಷೆಯ ಜತೆಗೆ ವಿವಿಧ ಬಗೆಯ ವೈದ್ಯಕೀಯ ಸೇವೆಗಳು ಇವೆ. ಭಾರತದಲ್ಲಿರುವ ಹೋಮಿಯೋಪತಿ ವೈದ್ಯಕೀಯ ಪದ್ಧತಿಯ ವೈದ್ಯರು ಎಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
‘ವೈದ್ಯಕೀಯ ಕ್ಷೇತ್ರ ಎಷ್ಟೇ ಬೆಳೆದರೂ ಜನರು ಕಾಯಿಲೆಗಳಿಗೆ ತುತ್ತಾಗುವುದು ತಪ್ಪಿಲ್ಲ. ನಮ್ಮ ಜೀವನಶೈಲಿ ಹಾಗೂ ಜಂಕ್ ಫುಡ್ ಸೇವನೆ ಇದೆಲ್ಲದಕ್ಕೂ ಕಾರಣವಾಗಿದೆ. ಹೀಗಾಗಿ ಜನರು ಒಳ್ಳೆಯ ಜೀವನಶೈಲಿ ರೂಢಿಸಿಕೊಳ್ಳಬೇಕು. ಆರೋಗ್ಯಕ್ಕೆ ಪೂರಕವಾಗಬಲ್ಲ ಆಹಾರ ಸೇವಿಸಬೇಕು. ಸಕಾರಾತ್ಮಕವಾಗಿ ಯೋಚಿಸಬೇಕು. ಆಗ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ’ ಎಂದು ಸಲಹೆ ನೀಡಿದರು.
‘ಜರ್ಮನಿಯ ತಂತ್ರಜ್ಞಾನ ಅನುಸರಿಸುವ ಹೋಮಿಯೋಪತಿ ಪದ್ಧತಿಯ ಚಿಕಿತ್ಸೆ ಫಲಿತಾಂಶ ಉತ್ತಮವಾಗಿದೆ. ಆದರೆ, ಮಾರುಕಟ್ಟೆ ಮಾಡುವಲ್ಲಿ ಯಶಸ್ಸು ಕಂಡಿಲ್ಲ. ವೈದ್ಯಕೀಯ ಚಿಕಿತ್ಸೆ ಸೇವೆ, ಉತ್ಪನ್ನಗಳು ಪ್ರತಿಯೊಬ್ಬರಿಗೂ ತಲುಪಬೇಕಾದರೆ ಉತ್ತಮ ರೀತಿಯಲ್ಲಿ ಮಾರುಕಟ್ಟೆ ವಿಸ್ತರಣೆಯಾಗಬೇಕು’ ಎಂದು ತಿಳಿಸಿದರು.
ಹಿರಿಯ ವೈದ್ಯರಾದ ಡಾ.ಎಂ.ಎ. ಉಡಚನಕರ, ಡಾ.ವಿ.ವಿ. ವೆರ್ನೇಕರ ಅವರನ್ನು ಸತ್ಕರಿಸಲಾಯಿತು.
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಖೆಯ ಅಧ್ಯಕ್ಷ ಡಾ.ಆರ್.ವೈ. ನದಾಫ್, ಡಾ.ಸೋನಾಲಿ ಸರ್ನೋಬತ್, ಡಾ.ಪದ್ಮರಾಜ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.