ಬೆಳಗಾವಿ: ‘ಕನ್ನಡ ದೇವ ಭಾಷೆಯಾಗಿದೆ. ಇದರಲ್ಲಿ ಸಿಗುವ ಸಾಹಿತ್ಯ ಬೇರಾವ ಭಾಷೆಯಲ್ಲೂ ದೊರೆಯುವುದಿಲ್ಲ. ಅದಕ್ಕಾಗಿ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.
ಕಸಾಪ ಜಿಲ್ಲಾ ಘಟಕದಿಂದ ನಗರದ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕನ್ನಡಿಗರಾದ ನಾವೆಲ್ಲರೂ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾತ್ರ ನಾವು ಕನ್ನಡಾಂಬೆಗೆ ಮತ್ತು ಭಾಷೆಗೆ ಗೌರವ ನೀಡಿದಂತಾಗುತ್ತದೆ. ಮನೆಯಲ್ಲಿ ಮಕ್ಕಳಿಗೆ ಭಾಷೆ, ಶರಣರ ವಚನ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ತಿಳಿಸಿ ಭಾಷೆಯನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಸಿ.ಜಿ. ಮಠಪತಿ ‘ಹಾನಗಲ್ ಕುಮಾರಸ್ವಾಮಿ ಅವರ ಸಾಮಾಜಿಕ ಚಿಂತನೆ’ ಕುರಿತು ಮಾತನಾಡಿ, ‘ಸಮಾಜಕ್ಕೆ ಕುಮಾರ ಸ್ವಾಮೀಜಿ ಕೊಡುಗೆ ಅಪಾರವಾಗಿದೆ’ ಎಂದು ಸ್ಮರಿಸಿದರು.
ನಿವೃತ್ತ ಶಿಕ್ಷಕಿ ಅಕ್ಕಮಹಾದೇವಿ ತೆಗ್ಗಿ ‘ಶರಣರು ಮತ್ತು ವಚನ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿದರು. ‘12ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯದ ಮೂಲಕ ಸಮಾಜದ ಉದ್ಧಾರ ಮಾಡಿದ್ದಾರೆ. ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅದನ್ನು ಮಕ್ಕಳಿಗೆ ತಿಳಿಸಬೇಕು’ ಎಂದು ಸಲಹೆ ನೀಡಿದರು.
ಎಸ್.ವಿ. ಬಾಗಿ, ಡಾ.ಸ.ಜ. ನಾಗಲೋಟಿಮಠ, ಜ್ಯೋತಿ ಮೂಗಿ, ಬೆಟಗೇರಿ ಕೃಷ್ಣಶರ್ಮ, ಮರಿಕಲ್ಲಪ್ಪ ಮಲಶೆಟ್ಟಿ, ನೇಮಿನಾಥ ಇಂಚಲ ಅವರ ಸ್ಮರಣೆಯಲ್ಲಿ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.