ಚನ್ನಮ್ಮನ ಕಿತ್ತೂರು: ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಬುಧವಾರ ನಡೆದ ಸೈಕ್ಲಿಂಗ್ ಟೂರ್ನಿಯಲ್ಲಿ ರಾಮದುರ್ಗ ತಾಲ್ಲೂಕಿನ ಚಂದರಗಿ ಕ್ರೀಡಾ ಶಾಲೆಯ ಸಿದ್ಧಲಿಂಗ ಬೂದಿಹಾಳ ಮತ್ತು ಬೆಳಗಾವಿ ಕ್ರೀಡಾ ವಸತಿ ಶಾಲೆಯ ಅಮೂಲ್ಯಾ ಪೂಜೇರಿ ಪ್ರಥಮ ಸ್ಥಾನ ಗಳಿಸಿದರು.
ಪುರುಷರ ವಿಭಾಗದ 24 ಕಿ.ಮೀ ಸ್ಪರ್ಧೆಯಲ್ಲಿ 38 ನಿಮಿಷ, 14 ಸೆಕೆಂಡುಗಳಲ್ಲಿ ಸಿದ್ದಲಿಂಗ ಗುರಿ ಮುಟ್ಟಿದರು. ಚಂದರಗಿಯ ಹೊನ್ನಪ್ಪ ಧರ್ಮಟ್ಟಿ(38 ನಿ., 15 ಸೆ.) ದ್ವಿತೀಯ ಮತ್ತು ಚಂದರಗಿಯ ಯಲ್ಲೇಶ ಹುಡೇದ(38 ನಿ., 19 ಸೆ.) ತೃತೀಯ ಸ್ಥಾನ ಗಳಿಸಿದರು.
ಮಹಿಳೆಯರ ವಿಭಾಗದಲ್ಲಿ ಅಮೂಲ್ಯಾ ಪೂಜೇರಿ 28 ನಿಮಿಷ, 52 ಸೆಕೆಂಡುಗಳಲ್ಲಿ 14 ಕಿ.ಮೀ ಕ್ರಮಿಸಿ ಮೊದಲ ಸ್ಥಾನ ಗಳಿಸಿದರೆ, ಬೆಳಗಾವಿಯ ಪ್ರೀತಿ ಹಳಬರ(29 ನಿ., 28 ಸೆ.) ದ್ವಿತೀಯ ಮತ್ತು ಮೂಡಲಗಿಯ ಕಾವೇರಿ ಕಾರದಗಿ(30 ನಿ., 30 ಸೆ.) ತೃತೀಯ ಸ್ಥಾನ ಪಡೆದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮನ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಪ್ರಶಸ್ತಿ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ.ಶ್ರೀನಿವಾಸ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ಎಚ್.ಪೂಜಾರಿ, ತರಬೇತುದಾರ ಎಂ.ಪಿ.ಮರನೂರ, ಬಸವರಾಜ ಜಕ್ಕನ್ನವರ, ಯಲ್ಲಪ್ಪ ಹಿರೇಕುರುಬರ ಇತರರಿದ್ದರು.