ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬ, ನಾಲ್ಕು ತಿಂಗಳ ತನ್ನ ಮಗುವನ್ನೇ ನೆಲಕ್ಕೆ ಎಸೆದು ಕೊಲೆ ಮಾಡಿದ್ದಾರೆ. ಪರಾರಿಯಾಗಿದ್ದ ಆರೋಪಿಯನ್ನು ಕುಡಚಿ ಪೊಲೀಸರು ಬಂಧಿಸಿದ್ದಾರೆ.
‘ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ಐಎಸ್ಎಫ್) ಕಾನ್ಸ್ಟೆಬಲ್, ಗೋಕಾಕ ತಾಲ್ಲೂಕಿನ ದುರದುಂಡಿ ಗ್ರಾಮದ ಬಸಪ್ಪ ಬಾಳುಂಕಿ ಕೊಲೆ ಆರೋಪಿ. ಸದ್ಯ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಘಟನೆ ಸೆ.18ರ ರಾತ್ರಿ ನಡೆದಿದೆ. ಹಸುಳೆಯನ್ನು ಬೈಕ್ ಮೇಲೆ ಜಾತ್ರೆಗೆ ಕರೆದುಕೊಂಡು ಹೋಗದಂತೆ ಪತ್ನಿ ತಡೆದಿದ್ದರಿಂದ ಸಿಟ್ಟಿಗೆದ್ದು ಮಗುವನ್ನು ರಸ್ತೆ ಮೇಲೆಯೇ ಜೋರಾಗಿ ಎಸೆದ. ತೀವ್ರ ಗಾಯಗೊಂಡ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ವರ್ಷದ ಹಿಂದೆ ವಿವಾಹವಾಗಿದ್ದ ಲಕ್ಷ್ಮೀ ಹೆರಿಗೆಗೆ ತವರಿಗೆ ಹೋಗಿದ್ದರು. ನಾಲ್ಕು ತಿಂಗಳ ಹಿಂದೆ ಗಂಡುಮಗು ಜನಿಸಿತ್ತು. ಕಳೆದ ಭಾನುವಾರ ಪತಿ, ಪತ್ನಿ ನಡುವೆ ಜಗಳದ ಭರದಲ್ಲಿ ಈ ಅವಘಡ ನಡೆದಿದೆ’ ಎಂದು ತಿಳಿಸಿದ್ದಾರೆ.
ತನ್ನ ಪತಿ, ಮೇಲಿಂದ ಮೇಲೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಇದನ್ನು ತಾಳದೇ ತವರು ಮನೆ ಸೇರಿದ್ದಾಗಿಯೂ ಲಕ್ಷ್ಮೀ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.