ನಿಪ್ಪಾಣಿ: ‘ಎರಡು ಸಾವಿರ ವರ್ಷಗಳಷ್ಟು ಇತಿಹಾಸವುಳ್ಳ ಕನ್ನಡ ಭಾಷೆ ಇಂದು ವಿಶ್ವಮಟ್ಟದಲ್ಲಿ ಬೆಳೆಯಬೇಕಾದಲ್ಲಿ ವ್ಯವಹಾರಿಕವಾಗಿಯೂ ತನ್ನದೇ ಆದ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ತಾಲ್ಲೂಕಿನ ಬೇಡಕಿಹಾಳದ ಕೆ.ಎಂ.ಎ.ಸಿ. ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಹೊಂಬಯ್ಯ ಹೊನ್ನಲಗೇರಿ ಹೇಳಿದರು.
ಕರ್ನಾಟಕ ರಾಜ್ಯೋತ್ಸವದ 50ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ‘ಸುವರ್ಣಸಂಭ್ರಮ’ ಶೀರ್ಷಿಕೆಯಡಿಯಲ್ಲಿ ‘ವ್ಯವಹಾರಿಕ ಕನ್ನಡ ಆಧುನಿಕ ರೂಪುರೇಷೆಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
‘ಅಂತರ್ಜಾಲ ಸಾಮಾಜಿಕ ಸಮೂಹ ಮಾಧ್ಯಮಗಳು, ಅದಕ್ಕೆ ಬಳಸಿರುವ ತಂತ್ರಜ್ಞಾನ ಮತ್ತು ತಂತ್ರಾಂಶಗಳನ್ನು ವಿದ್ಯಾರ್ಥಿಗಳು ಅರಿತು ಕನ್ನಡವನ್ನು ಅನ್ನದ ಭಾಷೆಯಾಗಿಸಿಕೊಳ್ಳುವ ಸಾಧ್ಯತೆಗಳನ್ನು ವಿದ್ಯಾರ್ಥಿದೆಸೆಯಿಂದಲೇ ರೂಢಿಸಿಕೊಳ್ಳಬೇಕಿದೆ’ ಎಂದರು.
ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರಿಯಾಂಕಾ ಕಮತೆ, ಉಪಪ್ರಾಚಾರ್ಯ ಡಾ. ಆರ್.ಜಿ. ಖರಾಬೆ, ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ ವೇದಿಕೆಯಲ್ಲಿದ್ದರು.
ಸುಪರ್ಣಾ ದೇಶಪಾಂಡೆ, ಸ್ನೇಹಲ ಹಿರೀಕುಡೆ, ಪಲ್ಲವಿ ಅನುರೆ, ರೇಣು ಗುಗ್ಗರೆ, ಎಸ್.ಬಿ. ಪಾಟೀಲ, ಡಾ.ಎಸ್.ಎಂ. ರಾಯಮಾನೆ, ಬಿ.ಜಿ. ಉಳ್ಳೇಗಡ್ಡಿ, ಶಂಕರಮೂರ್ತಿ ಕೆ.ಎನ್., ಡಾ. ಬಸವರಾಜ ಜನಗೌಡ, ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.