ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿಯ ಗೃಹ ಕಚೇರಿಯಲ್ಲಿ ಭಾನುವಾರವೂ ಸಾರ್ವಜನಿಕರ ಅಹವಾಲು ಆಲಿಸಿದರು.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಜನರು ಭಾನುವಾರ ಕೂಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಗೃಹ ಕಚೇರಿಯಲ್ಲೇ ಉಳಿದ ಸಚಿವೆ ಎಲ್ಲರ ಮನವಿಗಳನ್ನು ಆಲಿಸಿ, ಕೆಲವರ ಸಮಸ್ಯೆಗೆ ಸ್ಥಳದಲ್ಲೇ ಸ್ಪಂದಿಸಿದರು. ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ, ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು.
ಮಹಿಳೆಯರು, ಮಕ್ಕಳು, ಯುವಕರು, ವೃದ್ದರು, ಅಂಗವಿಕಲರು ಸೇರಿದಂತೆ ಎಲ್ಲ ವರ್ಗದ ಜನರು ಅಹವಾಲು ಸಲ್ಲಿಸಲು ಆಗಮಿಸಿದ್ದರು.
ಶನಿವಾರ ಕೂಡ ಇಡೀ ದಿನ ಗೃಹಕಚೇರಿಗೆ ಬಂದ ಜನರ ಮನವಿಗಳನ್ನು ಅವರು ಆಲಿಸಿದರು. ರಾತ್ರಿ 9ರ ನಂತರವೂ ಜನ ಸರದಿಯಲ್ಲಿ ನಿಂತು ಮನವಿ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.
ಆರ್ಥಿಕ ನೆರವು:
ನಾಯಿ ಕಡಿತದಿಂದ ಮೃತಪಟ್ಟ ಖಾನಾಪುರ ತಾಲ್ಲೂಕಿನ ಗೋಧೋಳಿ ಗ್ರಾಮದ ಬಾಲಕಿಯ ಕುಟುಂಬಕ್ಕೆ ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ₹50 ಸಾವಿರ ನೆರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೀಡಿದರು.
ನಾರಾಯಣ ಕದಮ್ ಅವರ 5 ವರ್ಷದ ಮಗಳು ಮನೆ ಕಟ್ಟೆಯ ಮೇಲೆ ಆಟ ಆಡುವ ಸಮಯದಲ್ಲಿ ನಾಯಿಯು ಕತ್ತಿನ ಭಾಗಕ್ಕೆ ಬಲವಾಗಿ ಕಚ್ಚಿದ ಕಾರಣ ಮಗುವಿನ ಮೆದುಳಿಗೆ ನಂಜು ಆಗಿ ಬಾಲಕಿ ಕೊನೆಯುಸಿರೆಳೆದಿದ್ದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.