ಮುಗಳಖೋಡ (ಬೆಳಗಾವಿ ಜಿಲ್ಲೆ): ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆಯಲು ಜನರು ಅಂತರವನ್ನೂ ಮರೆತು ಶುಕ್ರವಾರ ಮುಗಿಬಿದ್ದರು.
‘ಕೋವಿಡ್ ನಿಯಮ ಉಲ್ಲಂಘನೆ ಆಗದಂತೆ ಸರದಿ ಸಾಲಿನಲ್ಲಿ ಬನ್ನಿರಿ’ ಎಂದು ಮನವಿ ಮಾಡಿದ ಆಸ್ಪತ್ರೆಯ ಸಿಬ್ಬಂದಿ ಜೊತೆ ಕೆಲವರು ವಾಗ್ವಾದ ನಡೆಸಿದರು.
ಲಸಿಕೆಗಾಗಿ ಬಹಳಷ್ಟು ಮಂದಿ ಬರುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ಲಸಿಕೆ ಸಿಗುತ್ತಿಲ್ಲ.
‘ನಿತ್ಯ 100 ಮಂದಿಗೆ ಟೋಕನ್ ಕೊಟ್ಟು ಲಸಿಕೆ ನೀಡಲಾಗುತ್ತಿದೆ. ಆದರೂ ಸಾರ್ವಜನಿಕರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜುಲೈ 17ರಿಂದ ವ್ಯವಸ್ಥೆ ಮಾಡಲಾಗುವುದು’ ಎಂದು ವೈದ್ಯಾಧಿಕಾರಿ ಎಸ್.ಎಂ. ಪಾಟೀಲ ಹೇಳಿದರು.
ಜನರನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಸಿಬ್ಬಂದಿಯು ಹಾರೂಗೇರಿ ಪೋಲಿಸ್ ಠಾಣೆಗೆ ವಿಷಯ ತಿಳಿಸಿದರು.
ಸ್ಥಳಕ್ಕೆ ಬಂದ ಪಿಎಸ್ಐ ರಾಘವೇಂದ್ರ ಖೋತ, ಅಂತರ ಕಾಯ್ದುಕೊಳ್ಳಬೇಕು ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಜನರಿಗೆ ಸೂಚಿಸಿದರು.
‘ನಿಯಮ ಉಲ್ಲಂಘಿಸಿದ ಬಗ್ಗೆ ದೂರು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.