ಬೆಳಗಾವಿ: ‘ನೀಟ್, ಜೆಇಇ, ಸಿಇಟಿ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರಿಸಲು ಕೆಎಲ್ಇ ಸಂಸ್ಥೆಯು ವಿವಿಧೆಡೆ 36 ಕಾಲೇಜುಗಳನ್ನು ತೆರೆದಿದೆ. ಪರಿಣತ ಸಂಪನ್ಮೂಲ ವ್ಯಕ್ತಿಗಳಿಂದ ಪರಿಣಾಮಕಾರಿ ಮಾರ್ಗದರ್ಶನ ನೀಡಿದ್ದರ ಫಲವಾಗಿ ಈ ಬಾರಿಯ ನೀಟ್ನಲ್ಲಿ 65 ವಿದ್ಯಾರ್ಥಿಗಳು 400ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ’ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ತಿಳಿಸಿದರು.
‘ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ದೂರದೃಷ್ಟಿ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯ ಕಾರಣ ಇದು ಸಾಧ್ಯವಾಗಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ಮುಂಚೆ ನೀಟ್, ಜೆಇಇ ಪರೀಕ್ಷೆಗಳ ತರಬೇತಿಗಾಗಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಬೆಂಗಳೂರು, ಮಂಗಳೂರು, ಪುಣೆ ನಗರಗಳಿಗೆ ವಲಸೆ ಹೋಗಬೇಕಾಗಿತ್ತು. ಇದನ್ನು ಮನಗಂಡು ಬೆಳಗಾವಿ, ಹುಬ್ಬಳ್ಳಿ, ಗದಗ, ಹಾವೇರಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ ಮುಂತಾದ ಕಡೆಗಳಲ್ಲಿ 36 ಸ್ವತಂತ್ರ ಪದವಿಪೂರ್ವ ಕಾಲೇಜುಗಳನ್ನು ತೆರೆಯಲಾಗಿದೆ. 792 ಮಂದಿ ನುರಿತ ಮರ್ಗದರ್ಶಕರಿದ್ದು, 25,084 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇಂಥ ಪ್ರಯತ್ನಕ್ಕೆ ಮೊದಲು ನಾಂದಿ ಹಾಡಿದ್ದೇ ಕೆಎಲ್ಇ ಸಂಸ್ಥೆ’ ಎಂದರು.
ಅಲ್ಲದೇ, ಪ್ರತಿ ವರ್ಷ ಶೇ 95ರಷ್ಟು ಅಂಕ ಪಡೆದ 50 ವಿದ್ಯಾರ್ಥಿಗಳಿಗೆ ಅರ್ಧ ಪ್ರವೇಶ ಶುಲ್ಕ ಮಾತ್ರ ತೆಗೆದುಕೊಂಡು ರಿಯಾಯಿತಿ ದರದಲ್ಲಿ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಇದು ಬಹಳ ಸಹಕಾಯಾಗಿದೆ. ಪ್ರೇರಣಾ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಎಲ್ಲದೇ, ನೀಟ್ನಲ್ಲಿ ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಗಳಿಸಲಾಗದವರು ಎರಡನೇ ಅವಧಿ ಕೇಳುವುದು ಸಾಮಾನ್ಯವಾಗಿದೆ. ಇಂಥವವರಿಗೆ ಮಾರ್ಗದರ್ಶನ ನೀಡಲು ಹುಬ್ಬಳ್ಳಿಯಲ್ಲಿ ವಿಶೇಷ ಕಾರ್ಯಕ್ರಮ, ತರಬೇತಿ ಕೂಡ ನೀಡಲಾಗುತ್ತಿದೆ. 24X7 ಗ್ರಂಥಾಲಯ, ಇಂಟರ್ನೆಟ್ ಸೌಕರ್ಯ, ನುರಿತ ಸಿಬ್ಬಂದಿಯನ್ನೂ ನೀಡಲಾಗುತ್ತಿದೆ ಎಂದರು.
ಈ ಬಾರಿಯ ನೀಟ್ನಲ್ಲಿ ಆರ್ಎಲ್ಎಸ್ ಕಾಲೇಜಿನ ರುಚಾ ಪಾವಶೆ 715 (ನಾಲ್ಕನೇ ರ್ಯಾಂಕ್), ಶ್ವೇತಾ ಸಾಂಬ್ರೇಕರ 695 (196 ರ್ಯಾಂಕ್) ಹಾಗೂ ಪಿ.ಸಿ. ಜಾಬಿನ್ ಕಾಲೇಜಿನ ಗಗನ ತಿಮ್ಮನಗೌಡರ (619ನೇ ರ್ಯಾಂಕ್) ಅವರ ಸಾಧನೆ ಅಭಿನಂದನೀಯ ಎಂದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಜಲಾಪುರೆ, ಆಜೀವ ಸದಸ್ಯ ಪ್ರೊ.ನಂಜಪ್ಪ, ಪ್ರೊ.ಸತೀಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.